ಮಂಗಳೂರು: ಖಾಸಗಿ ಎಂಜಿನಿಯರಿಂಗ್ ಪದವಿ ಕಾಲೇಜುಗಳಲ್ಲಿ ಸೀಟ್ ಪಡೆಯಲು ಕಾಮೆಡ್-ಕೆ ನಡೆಸಿದ ಪರೀಕ್ಷೆಯಲ್ಲಿ ಮೂಡುಬಿದಿರೆ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಶಿಶಿರ್ ಹೆಚ್ ಶೆಟ್ಟಿ ಮೊದಲ ರ್ಯಾಂಕ್ ಗಳಿಸಿದ್ದಾರೆ.
ರಾಷ್ಟ್ರದಾದ್ಯಂತ 1,13,111 ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆದಿದ್ದು, ಮೂಡುಬಿದಿರೆಯ ಎಕ್ಸಲೆಂಟ್ ಕಾಲೇಜ್ ಗಮನಾರ್ಹ ಸಾಧನೆ ಮಾಡಿದೆ. ಮೂಡುಬಿದಿರೆ ಹರೀಶ ಶೆಟ್ಟಿ ಮತ್ತು ಸುಮಿತಾ ಶೆಟ್ಟಿ ಮಗನಾದ ಶಿಶಿರ್ ಹೆಚ್ ಶೆಟ್ಟಿ ಜೆಇಇ ಆಡ್ವಾನ್ಸ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ 664 ನೇ ಸ್ಥಾನ ಗಳಿಸಿದ್ದಾರೆ. ಜೆಇಇ ಮೇನ್ಸ್ನಲ್ಲಿ 99.971 ಪರ್ಸೆಂಟೇಜ್, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಪರೀಕ್ಷೆಯಲ್ಲಿ ಇಂಜಿನಿಯರಿಂಗ್ ವಿಭಾಗದಲ್ಲಿ 4ನೇ ರ್ಯಾಂಕ್, ಕರ್ನಾಟಕ ಪರೀಕ್ಷಾ ಮಂಡಳಿ ನಡೆಸಿದ ದ್ವಿತೀಯ ಪಿಯುಸಿಯಲ್ಲಿ ರಾಜ್ಯ ಮಟ್ಟದಲ್ಲಿ 7ನೇ ರ್ಯಾಂಕ್ (593 ಅಂಕಗಳು) ಪಡೆದು ವಿಶಿಷ್ಟ ಸಾಧನೆ ಮಾಡಿದ್ದಾರೆ.
ಎಕ್ಸಲೆಂಟ್ ಮೂಡುಬಿದಿರೆ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳು, ಉತ್ಕೃಷ್ಟ ಸಾಧನೆ ತೋರಿಸಿದ್ದು ಬೋರ್ಡ್ ಪರೀಕ್ಷೆಯಲ್ಲಿ ಒಟ್ಟು 15 ರ್ಯಾಂಕ್ಗಳು, ಜೆಇಇ ಆಡ್ವಾನ್ಸ್ನಲ್ಲಿ ರಾಷ್ಟ್ರಮಟ್ಟದಲ್ಲಿ 5000 ರ್ಯಾಂಕ್ನ ಒಳಗೆ 6 ವಿದ್ಯಾರ್ಥಿಗಳು, ಸಿಇಟಿಯಲ್ಲಿ ನಾನಾ ವಿಭಾಗಗಳಲ್ಲಿ 100 ರೊಳಗೆ 13 ರ್ಯಾಂಕ್, 500 ರೊಳಗೆ 38 ರ್ಯಾಂಕ್, 1000 ರೊಳಗೆ 64 ರ್ಯಾಂಕ್ ಪಡೆದು ರಾಜ್ಯದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೃತ್ತಿಪರ ಕೋರ್ಸ್ಗಳ ಪ್ರವೇಶಾತಿಗಾಗಿ ಅರ್ಹತೆ ಗಳಿಸಿದ್ದಾರೆ. ಎನ್ಡಿಎ, ನಾಟಿ ಲಿಖಿತ ಪರೀಕ್ಷೆಗಳಲ್ಲಿ ಸಂಸ್ಥೆಯ 9 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ರಾಷ್ಟ್ರೀಯ ಮೆರಿಟೈಮ್ ಯೂನಿವರ್ಸಿಟ ಮುಕ್ತ ಸ್ಪರ್ಧೆಯಲ್ಲಿ 124 ಸ್ಥಾನ ಪಡೆಯುವುದರೊಂದಿಗೆ ಮೂಡುಬಿದಿರೆ ಎಕ್ಸಲೆಂಟ್ ಸಂಸ್ಥೆ ಗುಣಮಟ್ಟದ ಶಿಕ್ಷಣದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಅತ್ಯುತ್ತಮ ರೀತಿಯಲ್ಲಿ ತರಬೇತುಗೊಳಿಸಿ ಪ್ರತಿವರ್ಷದಂತೆ ಈ ವರ್ಷವೂ ದಾಖಲೆ ಫಲಿತಾಂಶವನ್ನು ಸಾಧಿಸಿದೆ.
ಅತ್ಯುತ್ತಮ ದಾಖಲೆಗಳೊಂದಿಗೆ ರಾಷ್ಟ್ರಮಟ್ಟದಲ್ಲಿ 1ನೇ ರ್ಯಾಂಕ್ ಪಡೆದಿರುವ ಶಿಶಿರ್ ಹೆಚ್ ಶೆಟ್ಟಿಯನ್ನು ಇಂದು ನಡೆದ ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಸಾಧನೆ ಬಗ್ಗೆ ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ವೇದಿಕೆಯಲ್ಲಿ ಉಪಪ್ರಾಂಶುಪಾಲ ಮನೋಜ್ ಕುಮಾರ್, ಸ್ಪರ್ಧಾತ್ಮಕ ಪರೀಕ್ಷೆಗಳ ವಿಭಾಗದ ಮುಖ್ಯಸ್ಥ ರಾಮಮೂರ್ತಿ, ಡಾ. ದಯಾನಂದ, ವಿದ್ಯಾರ್ಥಿಯ ತಂದೆ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು. ಉಪನ್ಯಾಸ ವಿಕ್ರಮ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.