ನಿಖಿಲ್ ಕುಮಾರಸ್ವಾಮಿ ಅವರ ಎರಡನೇ ಚಿತ್ರ ಸೀತಾರಾಮ ಕಲ್ಯಾಣ. ಎ.ಹರ್ಷ ನಿರ್ದೇಶನದ ಈ ಸಿನಿಮಾ ಈಗಾಗಲೇ ನಾನಾ ದಿಕ್ಕಿನಿಂದ ಪ್ರೇಕ್ಷಕರನ್ನ ಆವರಿಸಿಕೊಂಡಿದೆ. ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿರೋ ಸೀತಾರಾಮ ಕಲ್ಯಾಣದ ಅಂತರಾಳ ಈಗ ಸಿಕ್ಕಿರೋ ಸಣ್ಣಪುಟ್ಟ ಸೂಚನೆಗಳಿಗಿಂತಲೂ ಮಜವಾಗಿದೆ.
ಒಟ್ಟಾರೆ ಕಥೆಯಲ್ಲಿ ಮಾಸ್, ಆಕ್ಷನ್, ಫ್ಯಾಮಿಲಿ ಎಮೋಷನಲ್… ಹೀಗೆ ಅದೆಷ್ಟೇ ಅಂಶಗಳಿದ್ದರೂ ಈ ಸಿನಿಮಾದ ಪ್ರಧಾನ ಅಂಶ ಮನೋರಂಜನೆ. ಹಾಗಿದ್ದ ಮೇಲೆ ಭರಪೂರವಾದ ಹಾಸ್ಯ ಸನ್ನಿವೇಶಗಳೂ ಇರೋದು ಪಕ್ಕಾ!
ಅದು ನಿಜ ಅಂತಾರೆ ನಿರ್ದೇಶಕ ಹರ್ಷ. ಸಾಮಾನ್ಯವಾಗಿ ಕಥೆ ಗಂಭೀರವಾಗಿ ಚಲಿಸಿದಾಗ ಒಂದು ಕಾಮಿಡಿ ಟ್ರ್ಯಾಕು ಕ್ರಿಯೇಟ್ ಮಾಡೋದಿದೆ. ಅದು ಹೆಚ್ಚಿನ ಸಂದರ್ಭದಲ್ಲಿ ಪ್ರೇಕ್ಷಕರಿಗೆ ಕಿರಿಕಿರಿ ಉಂಟು ಮಾಡೋದೇ ಹೆಚ್ಚು. ಆದರೆ ಕಥೆಯೊಳಗೇ ಸಹಜ ಕಾಮಿಡಿಯ ಕಿಕ್ಕೇರುವಂತೆ ಮಾಡೋದು ಕೊಂಚ ರಿಸ್ಕಿ ಕೆಲಸ. ನಿರ್ದೇಶಕ ಹರ್ಷ ಅದನ್ನು ಈ ಸಿನಿಮಾದಲ್ಲಿ ಮಾಡಿದ್ದಾರೆ.
ಸೀತಾರಾಮ ಕಲ್ಯಾಣದಲ್ಲಿ ಕಾಮಿಡಿ ಸನ್ನಿವೇಶಗಳ ಒಡ್ಡೋಲಗವೇ ಇದೆ. ಅದು ಕಥೆಯ ವೇಗದೊಂದಿಗೇ ಬೆರೆತು ಹೋಗಿದೆ. ಚಿಕ್ಕಣ್ಣ, ಕಾಮಿಡಿ ಕಿಲಾಡಿ ಖ್ಯಾತಿಯ ನಯನಾ, ಶಿವರಾಜ್ ಕೆ ಆರ್ ಪೇಟೆ, ಸಂಜು ಬಸಯ್ಯ ಮುಂತಾದವರು ಭಿನ್ನ ಪಾತ್ರಗಳ ಮೂಲಕವೇ ನಗೆ ಉಕ್ಕಿಸಲಿದ್ದಾರೆ.
ಆದರೆ ಈ ಕಾಮಿಡಿ ವಿಚಾರದಲ್ಲಿಯೇ ಮತ್ತೊಂದು ವಿಶೇಷವಿದೆ. ಇದುವರೆಗೆ ಗಂಭೀರವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಕಲಾವಿದರೂ ಕೂಡಾ ನಗೆ ಚಿಮ್ಮಿಸುವಂಥಾ ಶೇಡಿನ ಪಾತ್ರಗಳನ್ನು ನಿರ್ವಹಿಸಿದ್ದಾರಂತೆ. ವಿಲನ್ ಆಗಿ ಅಬ್ಬರಿಸುತ್ತಾ ಬಂದಿರೋ ರವಿಶಂಕರ್ ಕೂಡಾ ಇಲ್ಲಿ ನಗಿಸಲಿದ್ದಾರೆ. ಹಿರಿಯ ನಟಿ ಗಿರಿಜಾ ಲೋಕೇಶ್ ಕೂಡಾ ಮಜವಾದ, ತಮಾಷೆ ಮಾಡೋ ಪಾತ್ರದಲ್ಲಿ ನಟಿಸಿದ್ದಾರಂತೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv