ಬೆಂಗಳೂರು: ಡಿಸೆಂಬರ್ ತಿಂಗಳಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯಲ್ಲ ಅನ್ನೋದು ಈಗ ಖಚಿತಗೊಂಡಿದೆ. ಈ ತಿಂಗಳಲ್ಲಿ ದೆಹಲಿಗೆ ಬರಬೇಡಿ ಅಂತ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಸಿಎಂ ಯಡಿಯೂರಪ್ಪ ಅವರಿಗೆ ಸಂದೇಶ ರವಾನಿಸಿದ್ದಾರೆ. ಆ ಮೂಲಕ ಸಚಿವ ಸಂಪುಟ ವಿಸ್ತರಣೆಗೆ ಜನವರಿಯಲ್ಲಿ ಧನುರ್ಮಾಸ ಮುಗಿದ ಬಳಿಕ ಮುಹೂರ್ತ ಫಿಕ್ಸ್ ಆಗುವುದು ಖಚಿತವಾಗಿದೆ.
ಡಿಸೆಂಬರ್ 22 ಅಂದರೆ ಇಂದು ಮುಖ್ಯಮಂತ್ರಿಗಳು ದೆಹಲಿಗೆ ಹೋಗಬೇಕಿತ್ತು. ಆದರೆ ಯಡಿಯೂರಪ್ಪ ಭೇಟಿಗೆ ಅಮಿತ್ ಶಾ ಅವರು ಅಪಾಯಿಟ್ಮೆಂಟ್ ಕೊಟ್ಟಿಲ್ಲ. ಬದಲಾಗಿ ಈ ತಿಂಗಳು ದೆಹಲಿಗೆ ಬರಬೇಡಿ ಎಂದು ಸಿಎಂಗೆ ಅಮಿತ್ ಶಾ ಸಂದೇಶ ಕಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಪೌರತ್ವ ಕಾಯ್ದೆಯ ಕಾವು ಇನ್ನೂ ಆರಿಲ್ಲ. ಜೊತೆಗೆ ಜಾರ್ಖಂಡ್ ಫಲಿತಾಂಶ ಇನ್ನೂ ಬಂದಿಲ್ಲ. ಜಾರ್ಖಂಡ್ ಫಲಿತಾಂಶ ಬಂದ ಮೇಲೆ ಅಲ್ಲಿ ಸರ್ಕಾರ ರಚನೆ ವಿಚಾರದಲ್ಲಿ ನಾವು ಮುಳುಗಿರುತ್ತೇವೆ. ಹಾಗಾಗಿ ಈ ವಾರ ನಾವು ಫುಲ್ ಬ್ಯುಸಿ ಇರುತ್ತೀವಿ. ದೆಹಲಿಗೆ ಈ ವಾರ ನೀವು ಬರೋದು ಬೇಡ ಎಂದು ಅಮಿತ್ ಶಾ ಅವರು ಯಡಿಯೂರಪ್ಪಗೆ ಸಂದೇಶ ಕಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನವರಿಯಲ್ಲಿ ಸಿಎಂ ದೆಹಲಿ ಭೇಟಿ ಕನ್ಫರ್ಮ್ ಆಗಿದೆ.
ಜನವರಿ ಮೊದಲ ವಾರದಲ್ಲಿ ದೆಹಲಿಗೆ ತೆರಳಲಿರುವ ಸಿಎಂ, ಆಗಲೇ ಸಚಿವ ಸಂಪುಟ ವಿಸ್ತರಣೆ ಕುರಿತು ಹೈಕಮಾಂಡ್ ಜೊತೆ ಮಾತುಕತೆ ಫೈನಲ್ ಮಾಡಿಕೊಂಡು ಬರಲು ನಿರ್ಧರಿಸಿದ್ದಾರೆ. ಜನವರಿಯಲ್ಲಿ ಧನುರ್ಮಾಸ ಮುಗಿದ ಕೂಡಲೇ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತವನ್ನೂ ನಿಗದಿ ಮಾಡಲಿದ್ದಾರೆ.
ಅಲ್ಲದೇ ನೂತನ ಶಾಸಕರ ಪೈಕಿ ಕೆಲವರು ಧನುರ್ಮಾಸದಲ್ಲಿ ಸಚಿವರಾಗಲು ಸಿದ್ಧರಿಲ್ಲ. ಯಡಿಯೂರಪ್ಪ ಮೊದಲೇ ಈ ತಿಂಗಳಲ್ಲಿ ಯಾವುದೇ ಶುಭ ಕಾರ್ಯ ಮಾಡಲು ಇಚ್ಚಿಸುವುದಿಲ್ಲ. ಈ ಕಾರಣಗಳಿಂದಲೂ ಸಂಪುಟ ವಿಸ್ತರಣೆ ಜಂಜಡ ಜನವರಿಗೆ ಹೋಗಿದೆ. ಸದ್ಯಕ್ಕೆ ಸಂಪುಟ ತಲೆನೋವು ಇಲ್ಲದಿರುವ ಕಾರಣ ಸೋಮವಾರದಿಂದ ಅಂದರೆ ನಾಳೆಯಿಂದ ಯಡಿಯೂರಪ್ಪನವರು ಸರಣಿ ಪ್ರವಾಸ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ರೈತ ಸಮಾವೇಶ, ವಿವಿಧ ದೇವಸ್ಥಾನಗಳಿಗೆ ಭೇಟಿ, ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗಳು ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಒಂದು ವಾರ ಬ್ಯುಸಿ ಇರಲಿದ್ದಾರೆ. ಡಿಸೆಂಬರ್ 23 ರಿಂದ 29 ರವರೆಗೆ ಯಡಿಯೂರಪ್ಪ ಫುಲ್ ಬ್ಯುಸಿಯಾಗಲಿದ್ದಾರೆ.