ಮೈಸೂರು: ನಗರದ ರಸ್ತೆಗಳಲ್ಲಿ ನಿರ್ಮಾಣವಾದ ಗುಂಡಿಗಳನ್ನು ದುರಸ್ಥಿ ಮಾಡಿಸಲು ಬೃಹತ್ ಕಟ್ಟಿರುವೆಗಳನ್ನೇ ಚಾಮರಾಜೇಂದ್ರ ಅಕಾಡೆಮಿ ಆಫ್ ವಿಷುವಲ್ ಆಟ್ರ್ಸ್(ಕಾವಾ) ವಿದ್ಯಾರ್ಥಿಗಳು ರಸ್ತೆಗಿಳಿಸಿದ್ದಾರೆ.
ಹೌದು, ಇದೇನಪ್ಪಾ ರಸ್ತೆ ಗುಂಡಿ ಸರಿ ಮಾಡೋಕೆ ಇರುವೆಗಳಿಂದ ಸಾಧ್ಯವೇ ಎಂದು ಅಚ್ಚರಿಯಾಗಬಹುದು. ಮೈಸೂರಿನ ನಜರ್ಬಾದ್ ರಸ್ತೆಯಲ್ಲಿ ಗುಂಡಿಗಳ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ರಸ್ತೆಯ ಮಧ್ಯೆ ಎಲ್ಲಿ ನೋಡಿದರೂ ಗುಂಡಿಗಳೇ ಕಾಣಸಿಗುತ್ತದೆ. ಹೀಗಾಗಿ ಕಾವಾ ವಿದ್ಯಾರ್ಥಿಗಳು ಈ ಕುರಿತು ಜಾಗೃತಿ ಮೂಡಿಸಲು ಗುಂಡಿಯಿಂದ ಇರುವೆಗಳು ಹೊರಬರುತ್ತಿರುವಂತೆ ಆಕೃತಿಗಳನ್ನು ರಸ್ತೆಗಳ ಮೇಲೆ ಬಿಡಿಸಿದ್ದಾರೆ.
- Advertisement 2
- Advertisement 3
ರಸ್ತೆಯಲ್ಲಿ ನಿರ್ಮಾಣವಾದ ಗುಂಡಿಗಳಿಂದ ಅನಾಹುತಗಳು, ಅಪಘಾತಗಳು ಸಂಭವಿಸಬಾರದು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ಕ್ರಮ ತೆಗೆದುಕೊಳ್ಳಬೇಕು ಎಂಬ ಒಂದೊಳ್ಳೆ ಉದ್ದೇಶದಿಂದ ಕಾವಾ ವಿದ್ಯಾರ್ಥಿಗಳು ವಿನೂತನ ಪ್ರಯತ್ನ ಮಾಡಿದ್ದಾರೆ. ರಸ್ತೆ ಮೇಲೆ ಬೃಹತ್ ಕಟ್ಟಿರುವೆಗಳ ಪ್ರತಿಬಿಂಬ ರಚಿಸಿ, ಗುಂಡಿ ಒಳಗಡೆಯಿಂದ ಕಟ್ಟಿರುವೆ ಬರುವಂತಹ ಆಕೃತಿಯನ್ನು ಚಿತ್ರಿಸಿದ್ದಾರೆ. ಈ ಚಿತ್ರವನ್ನು ನೋಡಿದರೆ ನಿಜವಾಗಿಯೂ ಇರುವೆಗಳು ಇರುವಂತೆ ಕಾಣಿಸುವುದರಿಂದ ರಸ್ತೆಯಲ್ಲಿ ಕೊಂಚ ಜಾಗೃತೆಯಿಂದ ಜನರು ಸಂಚರಿಸುತ್ತಾರೆ.
- Advertisement 4
ಈ ಹೊಸ ತರಹದ ಪ್ರಯತ್ನದಿಂದಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಗಳ ದುರಸ್ಥಿ ಕಾರ್ಯ ಮಾಡಲು ಮುಂದಾಗಬೇಕು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv