ಹೈದರಾಬಾದ್: ತೆಲಂಗಾಣ (Telangana Election Results) ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ (Congress) ಸ್ಪಷ್ಟ ಬಹುಮತ ಸಾಧಿಸುವುದು ಖಚಿತವಾಗಿದ್ದು, ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಪ್ರತಿಕ್ರಿಯಿಸಿದ್ದಾರೆ.
ತೆಲಂಗಾಣದ ಜನರು ಬದಲಾವಣೆ ಬಯಸಿದ್ದಾರೆ. ಪ್ರಗತಿ ಮತ್ತು ಅಭಿವೃದ್ಧಿಗೆ ತಮ್ಮ ಬೆಂಬಲ ಎಂದು ನಿರ್ಧರಿಸಿದ್ದಾರೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತ್ ರೆಡ್ಡಿ. ಅವರೇ ತಂಡದ ನಾಯಕ ಎಂದು ಡಿಕೆಶಿ ತಿಳಿಸಿದ್ದಾರೆ. ಇದನ್ನೂ ಓದಿ: ಮತ್ತೆ ಮಾಮಾಜಿ ಮ್ಯಾಜಿಕ್ – ಬಿಜೆಪಿ ಸುನಾಮಿಗೆ ಕಾಂಗ್ರೆಸ್ ಕೊಚ್ಚಿ ಹೋಗಿದ್ದು ಹೇಗೆ?
ಸಿಎಂ ಯಾರಾಗಬೇಕು ಎಂಬ ನಿರ್ಧಾರವನ್ನು ಪಕ್ಷ ತೆಗೆದುಕೊಳ್ಳುತ್ತದೆ. ಸಾಮೂಹಿಕ ನಾಯಕತ್ವದ ಮೇಲೆ ಚುನಾವಣೆ ನಡೆದಿತ್ತು. ನಾನು ಕೆಸಿಆರ್ ಅಥವಾ ಕೆಟಿಆರ್ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ತೆಲಂಗಾಣ ಜನರೇ ಅವರಿಗೆ ಉತ್ತರ ನೀಡಿದ್ದಾರೆ ಎಂದು ಹೇಳಿದ್ದಾರೆ.
ಆಂಧ್ರದಿಂದ ಬೇರ್ಪಟ್ಟು ಹೊಸ ರಾಜ್ಯವಾಗಿ ಉದಯವಾದ ನಂತರ ತೆಲಂಗಾಣದಲ್ಲಿ ಎರಡು ಬಾರಿ ಚುನಾವಣೆ ನಡೆದಿದೆ. ಎರಡು ಬಾರಿಯೂ ಕೆ.ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್ಎಸ್ ಪಕ್ಷವು ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಏರಿದೆ. ಈ ಬಾರಿ ಚುನಾವಣೆಯು ಕೆಸಿಆರ್ಗೆ ಸುಲಭದ ಹಾರಿಯಾಗಿ ಉಳಿದಿಲ್ಲವೆಂಬ ಸೂಚನೆಯನ್ನು ಮತಗಟ್ಟೆ ಸಮೀಕ್ಷೆಗಳು ನೀಡಿದ್ದವು. ಅದರಂತೆ ಕಾಂಗ್ರೆಸ್ ರಾಜ್ಯದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದನ್ನೂ ಓದಿ: ದೇಶಕ್ಕೆ ಒಂದೇ ಗ್ಯಾರಂಟಿ ಅದು ಮೋದಿ ಗ್ಯಾರಂಟಿ – #ModiKiGuarantee ಫುಲ್ ಟ್ರೆಂಡ್
119 ಮತ ಕ್ಷೇತ್ರಗಳಿರುವ ತೆಲಂಗಾಣದಲ್ಲಿ ಬಹುಮತಕ್ಕೆ 60 ಸ್ಥಾನಗಳ ಅಗತ್ಯವಿದೆ. ಕಾಂಗ್ರೆಸ್ 66, ಬಿಆರ್ಎಸ್ 39, ಬಿಜೆಪಿ 9, ಎಐಎಂಐಎಂ 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.