ಬೆಂಗಳೂರು: ರಾಜಧಾನಿಯಲ್ಲಿರುವ ಇಂಡಸ್ಟ್ರಿಯೊಂದರ ಮ್ಯಾನೇಜರ್ ಆ ಕಂಪನಿಯಲ್ಲಿ ಆದ ಮೋಸವನ್ನು ಎತ್ತಿ ತೋರಿಸಿದಕ್ಕೆ ಆತನ ಮೇಲೆ ಸಹೋದ್ಯೋಗಿಗಳೇ ಹಲ್ಲೆ ನಡೆಸಲು ಯತ್ನಿಸಿದ ಘಟನೆ ಗರುಡಾಚಾರ್ ಪಾಳ್ಯದಲ್ಲಿ ನಡೆದಿದೆ.
ಅಶ್ವಿನ್ ಎಂಬವರು ಹಲ್ಲೆಗೊಳಗಾದ ಮ್ಯಾನೇಜರ್. ಅಶ್ವಿನ್ ಗರುಡಾಚಾರ್ ಪಾಳ್ಯದ ರಾಜ್ಮನೆ ಇಂಡಸ್ಟ್ರಿಸ್ನಲ್ಲಿ ಪರ್ಚೇಸಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಈ ಕಾಲದಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡೋರು ಸಿಗೋದೆ ಕಡಿಮೆ. ಅದರಲ್ಲು ಕೆಲಸ ಮಾಡ್ತಿರೊ ಜಾಗದಲ್ಲಿ ಆಗುವ ಮೋಸವನ್ನು ಬೆಳಕಿಗೆ ತರಲು ಯಾರು ಮುಂದೆ ಬರಲ್ಲ. ಆದ್ರೆ ಅಶ್ವಿನ್ ತನ್ನ ಕಂಪನಿಯಲ್ಲಿ ಕೆಲವರಿಂದ ಆಗುತ್ತಿದ್ದ ಮೋಸವನ್ನು ಪತ್ತೆ ಮಾಡಿ ಬೆಳಕಿಗೆ ತಂದಿದ್ದರು. ಹೀಗೆ ಬಿಟ್ಟರೇ ತಮಗೆ ಮುಂದೆ ತೊಂದರೆ ಗ್ಯಾರಂಟಿ ಅಂತಾ ಆಶ್ವಿನ್ ಜೊತೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳೇ ಅಶ್ವಿನ್ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ. ಆದ್ರೆ ಅದೃಷ್ಟವಶಾತ್ ಅಶ್ವಿನ್ ಹೇಗೋ ಪಾರಾಗಿ ಜೀವ ಉಳಿಸಿಕೊಂಡಿದ್ದಾರೆ.
ಡಿ. 25ರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಾಗ ಮೂವರು ವ್ಯಕ್ತಿಗಳು ಅಶ್ವಿನ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಆದ್ರೆ ಬೈಕ್ ನಿಲ್ಲಿಸದೇ ಅದೇಗೊ ಅಶ್ವಿನ್ ಬಚಾವಾಗಿದ್ದರು. ಬಳಿಕ ಈ ಕುರಿತು ಕಂಪನಿ ಆಡಳಿತ ಮಂಡಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಅಶ್ವಿನ್ ಮಹದೇವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂರು ದಿನಗಳ ಕಾಲ ಅಶ್ವಿನ್ ಮೇಲೆ ಹಲ್ಲೆ ನಡೆದಿದ್ದ ಸ್ಥಳದಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದು ಆತನ ಸಹೋದ್ಯೋಗಿಗಳೇ ಎಂಬ ಸತ್ಯಾಂಶ ಹೊರ ಬಂದಿದೆ. ಹಲ್ಲೆ ನಡೆಸಲು ಯತ್ನಿಸಿದವರನ್ನು ರಾಜ್ಮನೆ ಇಂಡಸ್ಟ್ರಿಸ್ನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜು, ಶ್ರೀಕಾಂತ್, ಪ್ರಕಾಶ್ ಎಂದು ಗುರುತಿಸಲಾಗಿದೆ.
ಘಟನೆ ಕುರಿತು ಮಹದೇವಪುರ ಪೊಲೀಸರು ತನಿಖೆ ಮುಂದುವರಿಸಿದ್ದು, ಆರೋಪಿಗಳ ಹುಡುಕಾಟ ನಡೆಸುತ್ತಿದ್ದಾರೆ.
https://www.youtube.com/watch?v=qM2yJKny7-s
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv