– ಶವವನ್ನ ಪ್ಯಾಕ್ ಮಾಡಿ, ಬೈಕಿನಲ್ಲಿ ಹೊತ್ತೊಯ್ದ
ಭುವನೇಶ್ವರ: ವ್ಯಕ್ತಿಯನ್ನು ಸಹೋದ್ಯೋಗಿಯೇ ಕೊಲೆ ಮಾಡಿ, ನದಿಯ ಬಳಿ ಮೃತದೇಹವನ್ನು ಸಮಾಧಿ ಮಾಡಿರುವ ಘಟನೆ ಒಡಿಶಾದ ಕಟಕ್ ಜಿಲ್ಲೆಯಲ್ಲಿ ನಡೆದಿದೆ.
ಸೌಮೇಂದ್ರ ಕುಮಾರ್ ಮೃತ ವ್ಯಕ್ತಿ. ಈತ ರೆಂಗಾಲಿಯ ಸಿಮೆಂಟ್ ಕಾರ್ಖಾನೆಯೊಂದರಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದನು. ಮೃತ ಕುಟುಂಬದವರು ಫೆ.3 ರಂದು ಕುಮಾರ್ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಈ ವೇಳೆ ಸಿಮೆಂಟ್ ಕಳ್ಳತನಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಮೃತ ಕುಮಾರ್ ಮತ್ತು ಸಹೋದ್ಯೋಗಿ ಬಿಸ್ವಾಜಿತ್ ಸಾಹು ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆಗ ಕೋಪಗೊಂಡ ಆರೋಪಿ, ಕುಮಾರ್ ಗೆ ಕಬ್ಬಿಣದ ರಾಡ್ನಿಂದ ಹೊಡೆದು ಕೊಂದಿದ್ದಾನೆ ಎಂದು ಪೊಲೀಸರು ತನಿಖೆ ವೇಳೆ ಪತ್ತೆ ಹಚ್ಚಿದ್ದಾರೆ.
ಆರೋಪಿ ಸಾಕ್ಷಿಗಳನ್ನು ನಾಶ ಮಾಡಲು ಕುಮಾರನ ಮೃತದೇಹವನ್ನು ಪ್ಯಾಕ್ ಮಾಡಿ ನದಿಯ ಬಳಿ ಸಮಾಧಿ ಮಾಡಿದ್ದಾನೆ. ತನಿಖೆ ವೇಳೆ ಮೃತದೇಹವನ್ನು ಬೈಕಿನಲ್ಲಿ ಆರೋಪಿ ಸಾಹು ತೆಗೆದುಕೊಂಡು ಹೋಗಿರುವುದು ಸಿಸಿಟಿವಿ ಕ್ಯಾಮೆರಾ ಸೆರೆಯಾಗಿದೆ. ತಕ್ಷಣ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ದಾರೆ.
ಆರೋಪಿ ಸಾಹು ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಕುಮಾರ್ ಮೃತದೇಹವನ್ನು ಸಮಾಧಿ ಮಾಡಿರುವ ಸ್ಥಳಕ್ಕೆ ಆರೋಪಿಯನ್ನು ಕರೆದುಕೊಂಡು ಹೋಗಿ ಶವವನ್ನು ಹೊರತೆಗೆಯಲಾಗಿದೆ. ಸದ್ಯಕ್ಕೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.