ಬೆಂಗಳೂರು: ರಾಷ್ಟ್ರೀಯ ಪಕ್ಷಗಳ ಚುನಾವಣಾ ಪ್ರಚಾರಕ್ಕೆ ರಾಜ್ಯ ನಾಯಕರೇ ತಲೆನೋವಾಗಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ನಾಯಕರ ನಡುವೆ ಪ್ರಚಾರದ ಶೀತಲ ಸಮರ ನಡೆಯುತ್ತಿದೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.
ಕೈ ಹಾಗೂ ಕಮಲ ಪಕ್ಷದೊಳಗಿನ ಕೋಲ್ಡ್ ವಾರ್ನಿಂದಾಗಿ ರಣರಂಗದಲ್ಲಿ ಸಿದ್ದರಾಮಯ್ಯ ಹಾಗೂ ಬಿಎಸ್ ಯಡಿಯೂರಪ್ಪ ಏಕಾಂಗಿಯಾಗಿದ್ದಾರೆ. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹೈದರಾಬಾದ್ ಕರ್ನಾಟಕಕ್ಕಷ್ಟೆ ಸೀಮಿತವಾಗಿದ್ದಾರೆ.
ಗೆಲುವಿನ ಹಠಕ್ಕೆ ಬಿದ್ದ ಪರಮೇಶ್ವರ್ ಕೊರಟಗೆರೆ ಬಿಟ್ಟು ಹೊರಬರುತ್ತಿಲ್ಲ. ಡಿ.ಕೆ.ಶಿವಕುಮಾರ್ ಒಕ್ಕಲಿಗ ಪ್ರಾಬಲ್ಯದ ಹಳೆ ಮೈಸೂರು ಭಾಗಕ್ಕಷ್ಟೆ ಸೀಮಿತವಾಗಿದ್ದಾರೆ. ನಾಯಕರ ಪ್ರಚಾರದ ಪ್ಲಾನ್ ರಾಜ್ಯ ಕಾಂಗ್ರೆಸ್ ಅಭ್ಯರ್ಥಿಗಳ ನೆಮ್ಮದಿ ಕೆಡಿಸಿದೆ. ಹೀಗೆ ಕಾಂಗ್ರೆಸ್ ಪಾಲಿಗೆ ರಾಜ್ಯ ನಾಯಕರು ತಲೆನೋವಾಗಿದ್ದಾರೆ.
ಬಿಜೆಪಿಯಲ್ಲೂ ಕೂಡ ನಾಯಕರ ಪ್ರಚಾರದ ಪ್ಲಾನ್ ತಲೆನೋವಾಗಿದೆ. ರಾಜ್ಯಾಧ್ಯಕ್ಷ ಬಿಎಸ್ವೈ ಒಬ್ಬರೇ ರಾಜ್ಯದ ಮೂಲೆ ಮೂಲೆ ಸುತ್ತತೊಡಗಿದ್ದಾರೆ. ಈಶ್ವರಪ್ಪ ಶಿವಮೊಗ್ಗ ಸೇರಿಕೊಂಡ್ರೆ, ಆರ್ ಅಶೋಕ್ ಪದ್ಮನಾಭನಗರಕ್ಕೆ ಸಿಮೀತರಾಗಿದ್ದಾರೆ. ಶೆಟ್ಟರ್ ಧಾರವಾಡ ಬಿಟ್ಟುಬರ್ತಿಲ್ಲ, ಅನಂತಕುಮಾರ್ ಹೆಗಡೆ ಉತ್ತರಕರ್ನಾಟಕ ರೌಂಡ್ಸ್ ನಲ್ಲಿದ್ದಾರೆ. ಹೀಗೆ ಕಾಂಗ್ರೆಸ್-ಬಿಜೆಪಿ ಎರಡು ರಾಷ್ಟ್ರೀಯ ಪಕ್ಷಗಳಲ್ಲೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ನಾಯಕರಗಳೇ ಸಿಗುತ್ತಿಲ್ಲ ಎನ್ನಲಾಗಿದೆ.
ಸಿದ್ದರಾಮಯ್ಯ, ಬಿಎಸ್ವೈ ಇಬ್ಬರು ನಾನೇ ಮುಂದಿನ ಸಿಎಂ ಅಂತಾ ರಾಜ್ಯದ ಮೂಲೆ ಮೂಲೆ ಸುತ್ತುತ್ತಿದ್ದಾರೆ. ಆದ್ರೆ ಎರಡು ಪಕ್ಷದ ಉಳಿದ ನಾಯಕರಿಗೆ ಮಾತ್ರ ತಮ್ಮ ಕ್ಷೇತ್ರದಷ್ಟೇ ಚಿಂತೆಯಾಗಿದೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.