– ಇದು ಕಾಂಗ್ರೆಸ್ ಶಾಸಕರಿಬ್ಬರ ಕಾಳಗದ ಬಿಗ್ ಸ್ಟೋರಿ
ಬಳ್ಳಾರಿ: ಬಳ್ಳಾರಿ ಜಿಲ್ಲಾ ಕಾಂಗ್ರೆಸ್ನಲ್ಲಿನ ಕಿತ್ತಾಟ, ಭಿನ್ನಮತಗಳಿಗೆ ಕೊನೆಯೇ ಇಲ್ಲ ಅನ್ನಿಸುತ್ತಿದೆ. ಸಚಿವ ಸ್ಥಾನಕ್ಕಾಗಿ ಕಿತ್ತಾಡಿದ್ದಾಯ್ತು, ಜಿಲ್ಲಾಧಿಕಾರಿ ವಿಚಾರದಲ್ಲಿ ಪತ್ರ ಸಮರ ನಡೆಸಿದ್ದಾಯ್ತು, ಈಗ ಮತ್ತೊಂದು ಕಿತ್ತಾಟ ಶುರುವಾಗಿದೆ. ಅದು ಮಾಜಿ ಸಿಎಂ ಸಿದ್ದರಾಮಯ್ಯರ ಶಿಷ್ಯರಾದ ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಹಾಗೂ ಹೊಸಪೇಟೆ ಶಾಸಕ ಆನಂದ್ ಸಿಂಗ್ ನಡುವೆ ಶೀತಲ ಸಮರ ನಡೆದಿದೆ.
ಇತ್ತೀಚೆಗೆ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಇವರಿಬ್ಬರು ಶಾಸಕರು ಬಹಿರಂಗವಾಗಿ ಆರೋಪ-ಪ್ರತ್ಯಾರೋಪಗಳನ್ನು ಮಾಡಿದ್ದರು. ತಮ್ಮ ಕ್ಷೇತ್ರಗಳಲ್ಲಿ ಪರಸ್ಪರ ಹಸ್ತಕ್ಷೇಪದ ಇವರಿಬ್ಬರು ದೂರು ನೀಡಿದ್ದರು. ಈ ವೇಳೆ ಸ್ವತಃ ಸಿದ್ದರಾಮಯ್ಯ, ಇಬ್ಬರನ್ನು ಸಮಾಧಾನಪಡಿಸಿ ಬುದ್ದಿ ಹೇಳಿದ್ದರು. ಆದರೂ ದೊಡ್ಡವರ ಮಾತು ಕೇಳದ ಶಾಸಕ ಆನಂದಸಿಂಗ್, ಭೀಮಾನಾಯ್ಕ್ ವಿರುದ್ಧ ತೊಡೆತಟ್ಟಿ ನಿಂತಿದ್ದಾರೆ. ಅಳಿಯ ಸಂದೀಪಸಿಂಗ್ ಮೂಲಕ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಘಟನೆಗೆ ಕೈ ಹಾಕಿದ್ದಾರೆ. ಇದಕ್ಕಾಗಿ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಎರಡು ಮನೆ, ಕಚೇರಿಗಳನ್ನ ಬಾಡಿಗೆ ತಗೆದುಕೊಂಡಿದ್ದಾರಂತೆ. ಇದರಿಂದ ಶಾಸಕರಿಬ್ಬರು ಕಿತ್ತಾಡಿಕೊಂಡಿದ್ದು, ಕಾರ್ಯಕರ್ತರಲ್ಲಿ ಇರಸುಮುರುಸು ಉಂಟು ಮಾಡಿದೆ.
ಕಳೆದೆರಡು ಚುನಾವಣೆಯಲ್ಲಿ ಭೀಮಾನಾಯ್ಕ್ ತಮ್ಮ ಸಹಾಯದಿಂದಲೇ ಗೆದ್ದಿದ್ದು ಅನ್ನೋ ಆನಂದಸಿಂಗ್ ಇದೀಗ ಅವರ ವಿರುದ್ಧವೇ ಕಾಂಗ್ರೆಸ್ ಕಾರ್ಯಕರ್ತರನ್ನ ಎತ್ತಿಗಟ್ಟಿ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ. ಅಲ್ಲದೇ ಮುಂದಿನ ಚುನಾವಣೆಯಲ್ಲಿ ತಮ್ಮ ಬೆಂಬಲಿಗನ್ನ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸ್ಪರ್ಧೆಗೆ ಇಳಿಸಲು ಮುಂದಾಗಿದ್ದಾರೆ. ಒಟ್ಟಿನಲ್ಲಿ ಬಳ್ಳಾರಿ ಕಾಂಗ್ರೆಸ್ ಅಂದ್ರೆ ಕಿತ್ತಾಟ, ಕಾಳಗ ಎನ್ನುವಂತಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv