-ನೀರಿನ ಘಟಕಕ್ಕೆ ಬೀಗ ಜಡಿದ ಶಾಸಕ ಅನ್ನದಾನಿ?
ಮಂಡ್ಯ: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಟ್ಟಾಗಿ ಸರ್ಕಾರ ರಚನೆ ಮಾಡಿ ಉತ್ತಮ ಆಡಳಿತ ನೀಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಲೇ ಬರುತ್ತಿದ್ದಾರೆ. ಮಂಡ್ಯದಲ್ಲಿ ದೋಸ್ತಿಗಳ ಕಚ್ಚಾಟದಿಂದ ಕುಡಿಯುವ ನೀರಿಲ್ಲದೆ ಸಾಮಾನ್ಯ ಜನರು ಶಿಕ್ಷೆ ಅನುಭವಿಸುವಂತಾಗಿದೆ. ದೋಸ್ತಿ ಸರ್ಕಾರದ ಹಾಲಿ ಮತ್ತು ಮಾಜಿ ಶಾಸಕರ ಕಚ್ಚಾಟದಿಂದ ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕುಂತೂರು ಗ್ರಾಮಸ್ಥರು ದೋಸ್ತಿ ಸರ್ಕಾರದ ಮೇಲೆ ಆಕ್ರೋಶ ಹೊರಹಾಕುತ್ತಿದ್ದಾರೆ. ಇಲ್ಲೊಂದು ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಹಲವು ದಿನಗಳಿಂದ ಜನರು ಇದರಿಂದ ನೀರು ಉಪಯೋಗಿಸುತ್ತಿದ್ದರು. 2 ದಿನಗಳ ಹಿಂದೆ ತಾಲೂಕು ಪಂಚಾಯ್ತಿ ಎಇಇ ಸೋಮಶೇಖರ್, ಶುದ್ಧನೀರಿನ ಘಟಕದ ಮೇಲಿದ್ದ ಮಾಜಿ ಶಾಸಕ ಪಿ.ಎಂ ನರೇಂದ್ರ ಸ್ವಾಮಿಯವರ ಭಾವಚಿತ್ರ ಹಾಗೂ ಬೋರ್ಡನ್ನು ಕಿತ್ತೆಸೆದಿದ್ದಾರೆ. ಅಲ್ಲದೆ ಘಟಕಕ್ಕೆ ಎರಡೆರಡು ಬೀಗ ಜಡಿದಿದ್ದು, ಇನ್ನೂ ಉದ್ಘಾಟನೆಯಾಗಿಲ್ಲ. ಉದ್ಘಾಟನೆಯಾಗುವವರೆಗೂ ಬೀಗ ಹಾಕುತ್ತೇವೆ ಅಂತಿದ್ದಾರೆ.
ತಮ್ಮ ಭಾವಚಿತ್ರ ಹಾಕಿಸಿಕೊಂಡು ಉದ್ಘಾಟನೆ ಮಾಡಲು ಹಾಲಿ ಶಾಸಕ ಅನ್ನದಾನಿ ಈ ರೀತಿ ಮಾಡಿದ್ದಾರೆ ಅಂತ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜುರನ್ನು ಕೇಳಿದ್ರೆ, ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಕಚ್ಚಾಟಕ್ಕೆ ಗ್ರಾಮಸ್ಥರು ಕುಡಿಯೋ ನೀರಿಗಾಗಿ ಪರಿತಪಿಸುವಂತಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv