ಉದಯ್ಪುರ: 13 ವರ್ಷದ ಸಹೋದರ ತನ್ನ ಪ್ರೀತಿಯ ಅಕ್ಕನಿಗೆ ಬರೋಬ್ಬರಿ 62 ಸಾವಿರ ರೂಪಾಯಿ ಚಿಲ್ಲರೆ ಹಣವನ್ನು ಉಳಿತಾಯ ಮಾಡಿ ಅದರಿಂದ ಒಂದು ಸ್ಕೂಟಿಯನ್ನು ಉಡುಗೊರೆ ನೀಡಿ ಸುದ್ದಿಯಾಗಿದ್ದಾನೆ.
ಅಕ್ಟೋಬರ್ 19 ದೀಪಾವಳಿಯ ಸಂಭ್ರಮ. ಅಂದು ನಗರದ ಹೋಂಡಾ ಟೂ ವೀಲರ್ ಶೋ ರೂಮ್ ಬಾಗಿಲನ್ನು ಮುಚ್ಚುವ ಸಮಯವಾಗಿತ್ತು. ಈ ವೇಳೆ 13 ವರ್ಷದ ಯಶ್ ತನ್ನ ಸಹೋದರಿ ರೂಪಾಲ್ ಜೊತೆ ಶೋರೂಂ ಪ್ರವೇಶಿಸಿದ್ದಾನೆ.
ಅಂಗಡಿಯ ಸಿಬ್ಬಂದಿ ಅವರಿಗೆ ಬೈಕ್ಗಳನ್ನು ತೋರಿಸಲು ಮುಂದಾಗಿದ್ದಾರೆ. ನಂತರ ಇಬ್ಬರು ತಮ್ಮ ಕೈಯಲ್ಲಿದ್ದ ಬ್ಯಾಗ್ನಿಂದ ಬರೋಬ್ಬರಿ 62 ಸಾವಿರ ರೂ. ಚಿಲ್ಲರೆ ನಾಣ್ಯವನ್ನು ನೀಡಿದ್ದಾರೆ. ಮೊದಲಿಗೆ ಮ್ಯಾನೇಜರ್ ಚಿಲ್ಲರೆ ಹಣವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ನಂತರ ಯಶ್ ತಮ್ಮ ಕಥೆಯನ್ನು ಹೇಳಿಕೊಂಡ ಮೇಲೆ ಮ್ಯಾನೇಜರ್ ಒಪ್ಪಿಕೊಂಡು ಬೈಕ್ ನೀಡಿದ್ದಾರೆ.
ಯಶ್ ತಂದೆ ಹಿಟ್ಟು ಗಿರಾಣಿ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದಾರೆ. ಯಶ್ 8ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿದ್ದು, ಇವನು ಮತ್ತು ಅಕ್ಕ ರೂಪಾಲ್ ಇಬ್ಬರೂ ತಮಗೆ ಕೊಡುವ ಪಾಕೆಟ್ ಹಣವನ್ನು ಕೂಡಿಡುತ್ತಾ ಬರುತ್ತಿದ್ದರು. ಕೆಲವು ಬಾರಿ ನೋಟು ಕೊಟ್ಟರೂ ಅದನ್ನು ನಾಣ್ಯವಾಗಿ ಬದಲಾಯಿಸಿಕೊಂಡು ಖರ್ಚು ಮಾಡಬಾರದು ಎಂದು ಉಳಿತಾಯ ಮಾಡುತ್ತಿದ್ದರು.
ಹಲವಾರು ವರ್ಷಗಳಿಂದ ಉಳಿತಾಯ ಮಾಡಿದ ಹಣ 63 ಸಾವಿರ ತಲುಪಿತ್ತು. ಹೀಗಾಗಿ ಈ ದೀಪಾವಳಿಗೆ ತಂದೆ-ತಾಯಿಗೆ ಸರ್ಪ್ರೈಸ್ ಕೊಡಬೇಕೆಂದು ಶೋ ರೂಮ್ಗೆ ತಮ್ಮ ಜೊತೆ ಚಿಕ್ಕಪ್ಪನನ್ನು ಕರೆದುಕೊಂಡು ಹೋಗಿದ್ದರು.
ಹೋಂಡಾ ಸಿಬ್ಬಂದಿ ಈ ನಾಣ್ಯಗಳನ್ನು ಎಣಿಸಲು ಸುಮಾರು ಎರಡುವರೆ ಗಂಟೆಗಳ ಸಮಯವನ್ನು ತೆಗೆದುಕೊಂಡಿದ್ದಾರೆ. ಕೆಲವರು ಅರ್ಧದಷ್ಟು ಚಿಲ್ಲರೆ ಹಣವನ್ನು ತಂದು ಕೊಟ್ಟಿದ್ದಾರೆ. ಈ ಹಿಂದೆ ಗರಿಷ್ಟ 29 ಸಾವಿರ ರೂ. ಚಿಲ್ಲರೆ ನಾಣ್ಯವನ್ನು ತಂದಿದ್ದರು. ಆದರೆ ಇದೇ ಮೊದಲ ಬಾರಿಗೆ ಚಿಲ್ಲರೆ ರೂಪದಲ್ಲಿ ಸಂಪೂರ್ಣ ಹಣವನ್ನು ಬಂದಿದೆ. ಇದೊಂದು ಭಾವನಾತ್ಮಕ ವಿಚಾರವಾಗಿದ್ದು, ಈ ಹಣವನ್ನು ಎಣಿಸಲು ನಮ್ಮ ಸಿಬ್ಬಂದಿ ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ ಎಂದು ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.
ರೂಪಾಲ್ ಮತ್ತು ಯಶ್ ಇಬ್ಬರು ತಾವು ಕೂಡಿಟ್ಟ ಹಣವನ್ನು ಒಂದು ಒಳ್ಳೆಯ ಕೆಲಸಕ್ಕಾಗಿ ಬಳಸಿದ್ದೇವೆ ಎಂದು ತುಂಬಾ ಸಂತೋಷ ಪಟ್ಟರು.