ಯಾದಗಿರಿ: ಮದುವೆಯ ಆಮಂತ್ರಣ ಪತ್ರದ ಮೂಲಕ ಬಿಜೆಪಿ ಕಾರ್ಯಕರ್ತನೋರ್ವ ಪ್ರಚಾರ ಮಾಡಲು ಹೋಗಿ ಫಜೀತಿಗೆ ಸಿಲುಕಿಕೊಂಡಿರುವ ಘಟನೆ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ನಡೆದಿದೆ.
ಲೋಕಸಭೆ ಚುನಾವಣೆ ಹಿನ್ನೆಲೆ ಭಾನುವಾರದಿಂದ ನೀತಿಸಂಹಿತೆ ಜಾರಿಯಾಗಿದ್ದು, ಯಾದಗಿರಿಯ ಬಿಜೆಪಿ ಕಾರ್ಯಕರ್ತ ಬಸವರಾಜ `ಮತ್ತೊಮ್ಮೆ ಮೋದಿ’ ಅಂತ ಬರೆಸಿ, ಕೆಲ ಬಿಜೆಪಿ ನಾಯಕರ ಫೋಟೋವನ್ನೂ ಕೂಡ ತಮ್ಮ ಮದುವೆ ಆಮಂತ್ರಣ ಪತ್ರದಲ್ಲಿ ಪ್ರಿಂಟ್ ಹಾಕಿಸಿದ್ದರು. ಆದ್ರೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಈ ರೀತಿ ರಾಜಕೀಯ ಪಕ್ಷ ಪರವಾಗಿ ಪ್ರಚಾರ ಮಾಡುವಂತ ಮದುವೆ ಕಾರ್ಡ್ ಹಂಚುವಂತಿಲ್ಲ ಎಂದು ಚುನಾವಣಾ ಅಧಿಕಾರಿಗಳು ಸೂಚಿಸಿದ್ದಾರೆ. ಇದನ್ನೂ ಓದಿ:ರಾಜಕಾರಣಿಗಳ ಮೇಲೆ ಆಯೋಗದಿಂದ ಹೊಸ ಬ್ರಹ್ಮಾಸ್ತ್ರ..!
ಕಳೆದ ಹದಿನೈದು ದಿನಗಳಿಂದ ಲಗ್ನ ಪತ್ರಿಕೆಗಳನ್ನು ಬಸವರಾಜ ಹಂಚುತ್ತಿದ್ದರು. ಆದರೆ ಭಾನುವಾರ ನೀತಿಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ, ಇಂದಿನಿಂದ ಲಗ್ನಪತ್ರಿಕೆ ಹಂಚಿಕೆ ಮಾಡದಿರುವಂತೆ ಚುನಾವಣಾ ಅಧಿಕಾರಿಗಳು ಬಸವರಾಜ ಅವರಿಗೆ ಸೂಚಿಸಿದ್ದಾರೆ. ಈಗಾಗಲೇ ಈ ಬಗ್ಗೆ ಪ್ರಾಥಮಿಕ ವರದಿ ತಯಾರಿಸಿರುವ ಆರ್ಓ ಅಧಿಕಾರಿ ಲಗ್ನಪತ್ರಿಕೆಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೂ ಪತ್ರಿಕೆ ಮುದ್ರಿಸಿದ ಮುದ್ರಣಾಲಯಕ್ಕೆ ಮುದ್ರಿತ ಪತ್ರಿಕೆಗಳ ಲೆಕ್ಕ ಕೂಡುವಂತೆ ಸೂಚಿಸಿದ್ದಾರೆ. ಇದನ್ನೂ ಓದಿ:ಸೇನೆ, ಸೈನಿಕರ ಚಿತ್ರಗಳನ್ನು ಬಳಸುವಂತಿಲ್ಲ: ರಾಜಕೀಯ ಪಕ್ಷಗಳಿಗೆ ಆಯೋಗ ಎಚ್ಚರಿಕೆ
ಇದೆ ಮಾರ್ಚ್ 24ಕ್ಕೆ ಯಾದಗಿರಿ ಜಿಲ್ಲೆಯ ಶಹಪುರ ಪಟ್ಟಣದಲ್ಲಿ ಬಸವರಾಜ ಹಾಗೂ ಸಹೋದರ ಶರಣಬಸವ ಇಬ್ಬರ ಮದುವೆಗಳು ನಿಶ್ಚಯವಾಗಿದೆ. ಆದರಿಂದ ಬಿಜೆಪಿ ಕಾರ್ಯಕರ್ತ ಆಗಿರುವ ಬಸವರಾಜ ಮತ್ತೊಮ್ಮೆ ಮೋದಿ ಅಂತ ಪ್ರಿಂಟ್ ಮಾಡಿಸಿದ್ದ ತಮ್ಮ ಲಗ್ನಪತ್ರಿಕೆಯನ್ನು ಎಲ್ಲರಿಗೂ ಹಂಚುವ ಮೂಲಕ ಮದುವೆಯ ಆಮಂತ್ರಣದ ಜೊತೆಗೆ ಬಿಜೆಪಿ ಪರ ಪ್ರಚಾರವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಆಮಂತ್ರಣದ ಮೇಲೆ ಸಾಲು ಸಾಲು ಬಿಜೆಪಿ ನಾಯಕರ ಫೋಟೋವನ್ನು ಕೂಡ ಹಾಕಿಸಿದ್ದರು. ಪ್ರಧಾನಿ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಕೇಂದ್ರ ಸಚಿವೆ ಸಾದ್ವಿ ನಿರಂಜನ್ ಜ್ಯೋತಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿಜೆಪಿ ನಾಯಕ ರಾಜುಗೌಡ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಹಾಗೂ ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ್ ಭಾವಚಿತ್ರಗಳನ್ನ ಪ್ರಿಂಟ್ ಮಾಡಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv