ಬೆಂಗಳೂರು: ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ, ಇನ್ನೊಂದು ಕಡೆ ಹೊಸ ಕನಸಿನ ಬೆನ್ನೆತ್ತಿ ನೂರಾರು ಸಿನಿಮಾಗಳು ಸೆಟ್ಟೇರುತ್ತಿವೆ, ಇನ್ನೂ ಕೆಲವರು ಶೂಟಿಂಗ್ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇಂತವರ ಸಾಲಿಗೆ ಹೊಸ ಪ್ರತಿಭೆಗಳ ಮುಖ್ಯ ಭೂಮಿಕೆಯ ಕಾಕ್ಟೈಲ್ ಸಿನಿಮಾ ಕೂಡ ಸೇರಿದೆ. ಕಾಕ್ಟೈಲ್ ಸಿನಿಮಾ ಹೊಸ ಭರವಸೆಯೊಂದಿಗೆ, ಕನಸಿನೊಂದಿಗೆ ಸ್ಯಾಂಡಲ್ವುಡ್ ಅಂಗಳದಲ್ಲಿ ಸೆಟ್ಟೇರಿರುವ ಸಿನಿಮಾ.
ಜುಲೈನಲ್ಲಿ ಸೆಟ್ಟೇರಿದ್ದ ಕಾಕ್ಟೈಲ್ ಚಿತ್ರ ಬೆಂಗಳೂರು ಸುತ್ತಮುತ್ತ ಎರಡು ಹಂತದ ಚಿತ್ರೀಕರಣ ಮುಗಿಸಿ ಚಿತ್ರೀಕರಣಕ್ಕೆ ಕುಂಬಳಕಾಯಿ ಒಡೆದಿದೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಸಿನಿಮಾದಲ್ಲಿದ್ದು ಶ್ರೀರಾಮ್ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ನವ ಪ್ರತಿಭೆಗಳಾದ ವೀರೇನ್ ಕೇಶವ್, ಚರೀಷ್ಮಾ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ನಟನೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ನಾಯಕನಟ ವೀರೇನ್ ಕೇಶವ್ ಅನುಪಮ್ ಖೇರ್ ನಟನಾ ಶಾಲೆಯಲ್ಲಿ ನಟನಾ ತರಬೇತಿ ಪಡೆದುಕೊಂಡಿದ್ದು, ಚೊಚ್ಚಲ ಸಿನಿಮಾದ ಮೇಲೆ ಅಪಾರ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಮತ್ತೆ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡಲು ಸಜ್ಜಾದ ಕಿರುತೆರೆಯ ಸ್ಟಾರ್ ನಿರೂಪಕಿ ಅನುಶ್ರೀ
ಸಸ್ಪೆನ್ಸ್ ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆ ಚಿತ್ರದಲ್ಲಿದ್ದು, ಒಂದೇ ಹೆಸರಿನ ಮತ್ತು ವಯಸ್ಸಿನ ಹಲವು ಹುಡುಗಿಯರ ಸರಣಿ ಕೊಲೆ ಸುತ್ತ ಕಥೆ ಸಾಗಲಿದೆ. ಕ್ಲೈಮ್ಯಾಕ್ಸ್ ಇಂಟ್ರಸ್ಟಿಂಗ್ ಆಗಿರಲಿದ್ದು, ಕಾಕ್ಟೈಲ್ ಪಾನೀಯದಂತೆ ಹಲವಾರು ಅಂಶಗಳನ್ನು ಸೇರಿಸಿ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಸಿನಿಮಾ ಮಾಡಲಾಗಿದೆ ಎನ್ನುತ್ತದೆ ಚಿತ್ರತಂಡ. ಸದ್ಯದಲ್ಲೇ ಟ್ರೇಲರ್ ಮೂಲಕ ಸಿನಿಮಾದ ಝಲಕ್ ತೋರಿಸಲು ಚಿತ್ರತಂಡ ಸಜ್ಜಾಗಿದೆ.
ಶೋಭರಾಜ್, ಮಹಾಂತೇಶ್, ಶಿವಮಣಿ, ಚಂದ್ರಕಲಾಮೋಹನ್, ಕರಿಸುಬ್ಬು, ರಮೇಶ್ ಪಂಡಿತ್ ಮುಂತಾದವರ ತಾರಗಣ ಚಿತ್ರದಲ್ಲಿದೆ. ಚಿತ್ರದ ಹಾಡುಗಳಿಗೆ ಹೃದಯಶಿವ ಹಾಗೂ ಸಿರಾಜ್ ಮಿಜಾರ್ ಸಾಹಿತ್ಯ ಕೃಷಿಯಿದ್ದು, ಲೋಕಿತ ವಸ್ಯ ಸಂಗೀತ ನಿರ್ದೇಶನದಲ್ಲಿ ಸಿನಿಮಾ ಮೂಡಿ ಬರಲಿದೆ. ರವಿವರ್ಮ ಛಾಯಾಗ್ರಹಣ, ಮೋಹನ್ ಬಿ ರಂಗಕಹಳೆ ಸಂಕಲನ, ನರಸಿಂಹ ಅವರ ಸಾಹಸ ನಿರ್ದೇಶನ ಕಾಕ್ಟೈಲ್ ಚಿತ್ರಕ್ಕಿದೆ. ವಿಜಯಲಕ್ಷ್ಮೀ ಕಂಬೈನ್ಸ್ ನಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಡಾ. ಶಿವಪ್ಪ ಬಂಡವಾಳ ಹೂಡಿದ್ದಾರೆ. ಇದನ್ನೂ ಓದಿ: ಸೆನ್ಸಾರ್ ಅಂಗಳದಲ್ಲಿರುವ ‘ಪುರುಷೋತ್ತಮ’ ಚಿತ್ರತಂಡದಿಂದ ಸದ್ಯದಲ್ಲೇ ಟ್ರೇಲರ್ ಉಡುಗೊರೆ