ಧಾರವಾಡ: ನಾಗರ ಪಂಚಮಿ ಮುನ್ನಾ ದಿನವೇ ನಾಗರಹಾವೊಂದು ಕಾಲೇಜಿನ ಕ್ಲಾಸ್ರೂಮಿಗೆ ಎಂಟ್ರಿ ಕೊಟ್ಟಿದ್ದು, ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಗಾಬರಿಗೊಂಡಿದ್ದ ಘಟನೆ ವಿದ್ಯಾಕಾಶಿ ಧಾರವಾಡದಲ್ಲಿ ನಡೆದಿದೆ.
ನಗರದ ಹೊರವಲಯದ ರಾಯಾಪುರದ ಎಸ್ಜೆಎಂವಿ ಮಹಾಂತ ಕಾಲೇಜಿನಲ್ಲಿಯೇ ನಾಗರಹಾವು ಪ್ರತ್ಯಕ್ಷವಾಗಿತ್ತು. ಎಂದಿನಂತೆ ವಿದ್ಯಾರ್ಥಿಗಳು ತರಗತಿಗೆ ಕುಳಿತುಕೊಳ್ಳಲು ಒಳಗೆ ಹೋಗಿದ್ದಾರೆ. ಆದರೆ ವಿದ್ಯಾರ್ಥಿಗಳು ಹೋಗುವ ಮೊದಲೇ ತರಗತಿಯ ಬೆಂಚಿನಲ್ಲಿ ನಾಗರಹಾವು ಕುಳಿತ್ತಿತ್ತು. ಇದನ್ನು ಕಂಡ ವಿದ್ಯಾರ್ಥಿಗಳು ಹೌಹಾರಿ ಚೀರುತ್ತ ತರಗತಿಯಿಂದ ಹೊರ ಓಡಿ ಹೋಗಿದ್ದಾರೆ.
ಉಪನ್ಯಾಸಕರು ಕೊಠಡಿಗೆ ಬಂದು ನೋಡಿದ್ದಾರೆ. ಆಗ ನಾಗರಹಾವು ಬೆಂಚಿನಡಿ ಸುತ್ತಿಕೊಂಡು ಕುಳಿತ್ತಿತ್ತು. ತಕ್ಷಣ ಉಪನ್ಯಾಸಕರು ಉರಗ ತಜ್ಞ ನಾಗರಾಜ್ಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಬಂದ ಉಗರ ತಜ್ಞ ನಾಗರಾಜ್ ಹಾವನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.