5 ಸಾವಿರ ರೂ.ಗೆ ಹಾವು ಖರೀದಿಸಿ, ಪತ್ನಿಯ ಕೊಲೆಗೆ ಟ್ವಿಸ್ಟ್ ಕೊಟ್ಟಿದ್ದ ಪತಿ ಅರೆಸ್ಟ್

Public TV
1 Min Read
snake

ಭೋಪಾಲ್: ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಹಾವು ಕಚ್ಚಿ ಸಾವನ್ನಪ್ಪಿದಳು ಎಂದು ಬಿಂಬಿಸಲು ಯತ್ನಿಸಿದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಧ್ಯಪ್ರದೇಶದ ಇಂದೋರ್‍ನ ಕನಡಿಯಾ ಪ್ರದೇಶದಲ್ಲಿ ಘಟನೆ ನಡೆದಿದ್ದು, 36 ವರ್ಷದ ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಅಮಿತೇಶ್ ಪಟೇರಿಯಾ ತನ್ನ ಪತ್ನಿ ಶಿವಾನಿ(35) ಅವರನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದು, ಅನುಮಾನ ಬಾರದಿರಲೆಂದು ಆಕೆಯ ಕೈಯಲ್ಲಿ ಸತ್ತ ಕಾಳಿಂಗ ಸರ್ಪದ ಹಲ್ಲುಗಳನ್ನು ನೆಟ್ಟಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.

snake 1

ಕೌಟುಂಬಿಕ ಕಲಹದಿಂದಾಗಿ ಪಟೇರಿಯಾ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಕೊಲೆ ಮಾಡಿದ ನಂತರ ಶವದ ಕೈಯಲ್ಲಿ ಸತ್ತ ಹಾವಿನ ಕೋರೆ ಹಲ್ಲುಗಳನ್ನು ನೆಟ್ಟಿದ್ದಾನೆ. ಈ ಮೂಲಕ ಹಾವು ಕಚ್ಚಿ ತನ್ನ ಪತ್ನಿ ಸಾವನ್ನಪ್ಪಿದಳು ಎಂದು ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶೈಲೇಂದ್ರ ಸಿಂಗ್ ಚೌಹಾಣ್ ಮಾಹಿತಿ ನೀಡಿದ್ದಾರೆ.

ಶವದ ಮರಣೋತ್ತರ ಪರೀಕ್ಷೆ ನಂತರ ಸತ್ಯ ತಿಳಿದಿದ್ದು, ಕತ್ತು ಹಿಸುಕಿದ್ದರಿಂದಾಗಿ ಶಿವಾನಿ ಸಾವನ್ನಪ್ಪಿದ್ದಾರೆ ಎಂದು ಬಹಿರಂಗವಾಗಿದೆ ಚೌಹಾಣ್ ತಿಳಿಸಿದ್ದಾರೆ.

arrest

ಪತ್ನಿಯನ್ನು ಕೊಲ್ಲುವ ಸಲುವಾಗಿ ಪಟೇರಿಯಾ 11ದಿನಗಳ ಹಿಂದೆ ರಾಜಸ್ಥಾನದ ಅಲ್ವಾರ್‍ನಿಂದ ಮರುಭೂಮಿಯ ಕಪ್ಪು ನಾಗರಹಾವನ್ನು 5 ಸಾವಿರ ರೂ.ಗೆ ಖರೀದಿಸಿದ್ದ. ನಂತರ ಅದನ್ನು ಮನೆಯಲ್ಲಿನ ಬಿರುವಿನಲ್ಲಿ ಮುಚ್ಚಿಟ್ಟಿದ್ದ. ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ ನಂತರ ಸಾಕ್ಷ್ಯ ನಾಶಪಡಿಸಲು ಹಾವನ್ನು ಸಹ ಸಾಯಿಸಿದ್ದಾನೆ ಎಂದು ಎಎಸ್‍ಪಿ ಮಾಹಿತಿ ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆ(ಐಪಿಸಿ)ಯ ವಿವಿಧ ಸೆಕ್ಷನ್‍ಗಳಡಿ ಹಾಗೂ ಹಾವು ಸಾಯಿಸಿದ್ದಕ್ಕೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪಟೇರಿಯಾ ಜೊತೆಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಅವನ ಸಹೋದರಿ ರಿಚಾ ಚತುರ್ವೇದಿ(38) ಹಾಗೂ ಅವನ ತಂದೆ ಓಂಪ್ರಕಾಶ್ ಪಟೇರಿಯಾ(73) ಅವರನ್ನು ಸಹ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *