ಮಂಗಳೂರು: ಕರಾವಳಿಯ ಕಡಲ ತೀರದ ನಿಗಾ ಇಡಲು ಸೆ.25 ರಂದು ದೇಶಕ್ಕೆ ಸಮರ್ಪಣೆಗೊಂಡಿದ್ದ ‘ವರಾಹ’ ಮಂಗಳೂರಿಗೆ ಆಗಮಿಸಿದೆ. ಪಣಂಬೂರಿನಲ್ಲಿರುವ ಎನ್ಎಂಪಿಟಿ ಬಂದರಿನಲ್ಲಿ ಕೋಸ್ಟ್ ಗಾರ್ಡ್ ಪಡೆಗೆ ಹಡಗು ಅಧಿಕೃತವಾಗಿ ಸೇರ್ಪಡೆಗೊಂಡಿದೆ.
ಕೋಸ್ಟ್ ಗಾರ್ಡ್ ಪಡೆಯ ಹಿರಿಯ ಅಧಿಕಾರಿಗಳಾದ ರಾಜ್ ಕಮಲ್ ಸಿನ್ಹಾ, ಲಕ್ಷ್ಮೀಕಾಂತ್ ಗಜಿಭಿಯೆ, ಸಿಐಎಸ್ಎಫ್ ಅಧಿಕಾರಿ ಆಶುತೋಷ್ ಗೌರ್ ಅವರು ನೂತನ ನೌಕೆಯನ್ನು ಸ್ವಾಗತಿಸಿದರು. ಕರಾವಳಿಯ ಸಮುದ್ರ ಮಾರ್ಗದಲ್ಲಿ ಕಳ್ಳಸಾಗಾಣಿಕೆ, ತೈಲ ಸೋರಿಕೆ, ಭದ್ರತೆಯ ಮೇಲೆ ಅಧಿಕಾರಿಗಳು ನಿಗ ವಹಿಸಲು ವರಾಹ ಹಡಗು ಸಹಾಯ ಮಾಡಲಿದೆ.
ಈ ಹಡಗು ತುರ್ತು ಸಂದರ್ಭದಲ್ಲಿ ಎರಡು ಎಂಜಿನ್ ಹೆಲಿಕಾಪ್ಟರ್ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ಹಡಗಿನಲ್ಲಿ 30 ಎಂಎಂ ಗನ್, 12.7 ಎಂಎಂ ಗನ್, ಅತ್ಯಾಧುನಿಕ ರಾಡಾರ್, ಸೆನ್ಸಾರ್, ಹೈಸ್ಪೀಡ್ ಬೋಟ್ಗಳು ಮತ್ತಿತರ ಸೌಲಭ್ಯ ಇರಲಿದೆ. 14 ಅಧಿಕಾರಿಗಳು ಮತ್ತು 89 ಮಂದಿ ಸಿಬ್ಬಂದಿಯನ್ನು ಹೊಂದಿರುವ ವರಾಹ ಹಡಗು ಯಾವುದೇ ಕ್ಷಣದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಿರಲಿದೆ.
Delighted to attend the Commissioning Ceremony of ‘ICG Varaha’ in Chennai today.
May Lord Varuna always bestow His blessings on the crew of ICG Varaha for contributing effectively towards the Nation's Maritime Interest and keeping our National Flag flying high. pic.twitter.com/ZjMQpXSZ6q
— Rajnath Singh (@rajnathsingh) September 25, 2019
2,100 ಟನ್ ಭಾರದ ಈ ಹಡಗು ಗಂಟೆಗೆ 26 ನಾಟಿಕಲ್ ಮೈಲ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದ್ದು, ಎಲ್ ಅಂಡ್ ಟಿ ಕಂಪನಿ ಸ್ವದೇಶಿ ತಂತ್ರಜ್ಞಾನದಲ್ಲಿ ಇದನ್ನು ನಿರ್ಮಿಸಿದೆ.
ಸೆ.25 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚೆನ್ನೈನಲ್ಲಿ ವರಾಹ ಹಡಗನ್ನು ದೇಶಕ್ಕೆ ಸಮರ್ಪಿಸಿದ್ದರು.