– ಎಲ್ಲಾ ರಸ್ತೆಗಳಲ್ಲಿ ಟೋಲ್ ಸಂಗ್ರಹ
ಬೆಂಗಳೂರು: ಶರವೇಗದಲ್ಲಿ ಬೆಳೆಯುತ್ತಿರುವ ಬೆಂಗಳೂರು ನಗರದ ನೀರಿನ ಸಮಸ್ಯೆ ನಿವಾರಿಸಲು ಸಮ್ಮಿಶ್ರ ಸರ್ಕಾರ ಹೊಸ ಉಪಾಯ ಹುಡುಕುತ್ತಿದೆ.
ಕಾವೇರಿ ನೀರಿಗೆ ಪರ್ಯಾಯವಾಗಿ ಲಿಂಗನಮಕ್ಕಿ ಜಲಾಶಯದಿಂದ ಕುಡಿಯುವ ನೀರು ತರುವ ಯೋಜನೆ ಜೊತೆಗೆ ತುಂಗಭದ್ರಾ ನದಿಯಿಂದಲೂ ನೀರು ಹರಿಸುವ ಯತ್ನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ತುಂಗಭದ್ರಾ ನದಿಯಿಂದ ಬೆಂಗಳೂರಿಗೆ 18 ಟಿಎಂಸಿ ನೀರು ತರುವ ಬಗ್ಗೆ ಯೋಜನೆಯ ರೂಪುರೇಷೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆಯ ಸಭೆಯಲ್ಲಿ ತುಂಗಭದ್ರಾ ನದಿಯಿಂದ ಬೆಂಗಳೂರಿಗೆ ನೀರು ತರುವ ಬಗ್ಗೆ ಎಂಜಿನಿಯರ್ ಗಳು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಸ್ಪಂದಿಸಿರುವ ಮುಖ್ಯಮಂತ್ರಿಗಳು ಯೋಜನೆ ಸಿದ್ಧಪಡಿಸಿ ಎಂದು ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಲಿಂಗನಮಕ್ಕಿಯಿಂದ 30 ಟಿಎಂಸಿ ನೀರುವ ತರುವ ಯೋಜನೆ ಹಿಂದಿನ ಸರ್ಕಾರದ್ದಾಗಿದ್ದು, ಅದರ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆಯೂ ಸಿಎಂ ಸಲಹೆ ನೀಡಿದ್ದಾರೆ. ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ತಂದಲ್ಲಿ ಕೋಲಾರ, ಚಿಕ್ಕಬಳ್ಳಾಪುರಗಳಿಗೂ ಕುಡಿಯಲು ಕೊಡಬಹುದು ಅನ್ನೋದು ಮುಖ್ಯಮಂತ್ರಿಗಳ ಚಿಂತನೆಯಾಗಿದೆ.
ಈ ಮಧ್ಯೆ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ 1,117 ಕಿ.ಮೀ. ರಸ್ತೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಎಲ್ಲ ರಸ್ತೆಗಳಲ್ಲಿ ಟೋಲ್ ಸಂಗ್ರಹಕ್ಕೆ ಲೋಕೋಪಯೋಗಿ ಸಚಿವ ರೇವಣ್ಣ ಸೂಚಿಸಿದ್ದಾರೆ.