-ಇನ್ನೆರಡು ವಾರದೊಳಗೆ ಸಂಪುಟ ಪುನರ್ ರಚನೆ!
ನವದೆಹಲಿ: ಲೋಕಸಮರದಲ್ಲಿ ಭರ್ಜರಿ ಜಯ ಗಳಿಸಿರುವ ಬಿಜೆಪಿ ಕೇಂದ್ರದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ. ಅಲ್ಲದೇ ರಾಜ್ಯದಲ್ಲಿ ಕೂಡ ಬಿಜೆಪಿ 28ಕ್ಕೆ 25 ಸ್ಥಾನ ಗೆದ್ದಿದೆ. ಈ ಹಿನ್ನೆಲೆ ಈಗ ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು, ಆಪರೇಷನ್ ಕಮಲ ತಪ್ಪಿಸಲು ದೋಸ್ತಿಗಳು ಹೊಸ ಮಾಸ್ಟರ್ ಪ್ಲಾನ್ ಮಾಡಿದ್ದಾರೆ.
ಆಪರೇಷನ್ ಕಮಲ ತಪ್ಪಿಸಲು ಜೂನ್ 5ರಂದು ಜೆಡಿಎಸ್- ಕಾಂಗ್ರೆಸ್ ಶಾಸಕರ ಜಂಟಿ ಸಭೆ ಆಯೋಜಿಸಿದೆ. ಅಲ್ಲದೆ ಇನ್ನು ಎರಡು ವಾರದೊಳಗೆ ಸಂಪುಟ ಪುನರ್ ರಚನೆ ಮಾಡಲು ಮೈತ್ರಿ ಮುಖಂಡರು ತೀರ್ಮಾನಿಸಿದ್ದಾರೆ. ಈ ಮೂಲಕ ಅತೃಪ್ತ ಶಾಸಕರಿಗೆ ಶೀಘ್ರದಲ್ಲೆ ಮಂತ್ರಿ ಸ್ಥಾನ ನೀಡಲು ಮೈತ್ರಿ ನಾಯಕರು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜೆಡಿಎಸ್ ತನ್ನ ಬಳಿ ಇರುವ ಎರಡು ಸಚಿವ ಸ್ಥಾನಗಳನ್ನು ಕಾಂಗ್ರೆಸ್ಸಿಗೆ ಬಿಟ್ಟು ಕೊಡಲು ನಿರ್ಧಾರಿಸಿದೆ ಎನ್ನಲಾಗುತ್ತಿದೆ. ಸಚಿವ ಆರ್.ವಿ. ದೇಶಪಾಂಡೆ ಬದಲಿಗೆ ಶಿವರಾಂ ಹೆಬ್ಬಾರ್ ಹಾಗೂ ಸಚಿವ ಕೃಷ್ಣ ಭೈರೇಗೌಡ ಬದಲಿಗೆ ರಾಮಲಿಂಗಾರೆಡ್ಡಿ, ಸಚಿವ ಸೋಮಶೇಖರ್ ಹಾಗೂ ಪರಮೇಶ್ವರ್ ನಾಯ್ಕ ಬದಲಿಗೆ ಶಾಸಕ ನಾಗೇಂದ್ರ ಅವರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ.
ಅಲ್ಲದೆ ಸಚಿವ ಯು.ಟಿ. ಖಾದರ್ ಗೆ ಹಾಗೂ ಸಚಿವೆ ಜಯಮಾಲಾ ಅವರಿಗೂ ಕೊಕ್ ನೀಡುವ ಸಾಧ್ಯತೆಗಳಿವೆ. ಹಾಗೆಯೇ ಶಾಸಕ ಬಿ.ಸಿ. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡಲು ಪ್ಲಾನ್ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಮೂಲಕ ಆಪರೇಷನ್ ಕಮಲಕ್ಕೆ ಚೆಕ್ಮೆಟ್ ಇಡಲು ದೋಸ್ತಿಗಳು ತಯಾರಿ ನಡೆಸುತ್ತಿದ್ದು, ಯಾವುದೇ ಕ್ಷಣದಲ್ಲೂ ಸಂಪುಟ ಸರ್ಜರಿ ನಡೆಯಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.