ತುಮಕೂರು: ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿಂತನೆ ಮಾಡಿದ್ದಾರೆ ಎಂದು ಸಂಸದ ಜಿ.ಎಸ್.ಬಸವರಾಜು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಗಾಂಧಿ ಸಂಕಲ್ಪ ಯಾತ್ರೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಕಾಲದಲ್ಲಿ ಏನಾದರೂ ಮಾಡಿ ಮದ್ಯವನ್ನು ನಿಷೇಧಿಸಬೇಕು ಎಂಬುದು ನನ್ನ ಬಯಕೆಯಾಗಿದೆ ಎಂದು ಯಡಿಯೂರಪ್ಪನವರು ನನ್ನ ಬಳಿ ಮಾತನಾಡುವಾಗ ತಮ್ಮ ಮನದಾಳವನ್ನು ಹಂಚಿಕೊಂಡಿದ್ದಾರೆ ಎನ್ನುವ ವಿಚಾರವನ್ನು ಬಹಿರಂಗ ಪಡಿಸಿದರು.
ಈ ಬಗ್ಗೆ ಸಿಎಂ ನನ್ನ ಜೊತೆ ಕೂಡ ಮಾತನಾಡಿದ್ದು, ಬ್ಯಾನ್ ಮಾಡಿದ ನಂತರ ಉಂಟಾಗುವ ಬೊಕ್ಕಸದ ಹೊರೆಯನ್ನು ಭರಿಸುವ ಬಗ್ಗೆಯೂ ತುಂಬಾ ಚಿಂತನೆ ನಡೆಸಿದ್ದಾರೆ. ಮದ್ಯ ನಿಷೇಧದ ಬಗ್ಗೆ ನಾವೂ ಕೂಡ ಸಂಸತ್ತಿನಲ್ಲಿ ಧ್ವನಿ ಎತ್ತುತ್ತೇವೆ. ಪ್ರಧಾನಿ ಮೋದಿ ನಿರ್ದೇಶನ ನೀಡಿ ಮದ್ಯವನ್ನು ನಿಷೇಧಿಸಬಹುದು ಎಂದು ತಿಳಿಸಿದರು.
ಈಗಾಗಲೇ ಗುಜರಾತ್ ಮತ್ತು ಬಿಹಾರದಲ್ಲಿ ಮದ್ಯ ನಿಷೇಧವಾಗಿದೆ. ಅದೇ ರೀತಿ ನಮ್ಮ ರಾಜ್ಯದಲ್ಲೂ ಸಹ ಮದ್ಯ ನಿಷೇಧವಾಗಬೇಕಿದೆ. ಈ ಕುರಿತು ಮುಖ್ಯಮಂತ್ರಿ ಬಳಿ ಇನ್ನಷ್ಟು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.