– ಸುದ್ದಿಗೋಷ್ಠಿ ನಡೆಸಿ ಖಂಡ್ರೆ, ಉಗ್ರಪ್ಪ ಆರೋಪ
– ಈಗಾಗಲೇ ಮಹಾರಾಷ್ಟ್ರ ಚುನಾವಣೆಯಲ್ಲಿ ಡಿಸಿಎಂಗಳು ಭಾಗಿ
ಬೆಂಗಳೂರು: ಮಹಾರಾಷ್ಟ್ರದ ಚುನಾವಣೆಯಲ್ಲಿ ಪ್ರಚಾರ ಕೈಗೊಳ್ಳಲು ಬಿಜೆಪಿ ವಿಧಾನಸಭಾ ವಿಶೇಷ ಅಧಿವೇಶನದ ಸಮಯವನ್ನು 3 ದಿನಗಳಿಗೆ ಮೊಟಕುಗೊಳಿಸಿದೆ ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಟೀಕೆ ಮಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತು ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ವಿ ಎಸ್ ಉಗ್ರಪ್ಪ ಅವರು, ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ನೆರೆ ಪೀಡಿತ ಜಿಲ್ಲೆಗಳಿಗೆ ಅಲ್ಪ ಪರಿಹಾರ ಘೋಷಣೆಗೆ ಮಾಡಿದೆ. ನಮ್ಮ ರಾಜ್ಯದ ಜನ ಎರಡನೇ ದರ್ಜೆಯ ಜನರಾ? ರಾಜ್ಯ ಸರ್ಕಾರ 70 ದಿನಗಳಾದರೂ ಕೇವಲ ಹತ್ತು ಸಾವಿರ ರೂ. ಗಳನ್ನು ಮಾತ್ರ ಪರಿಹಾರವಾಗಿ ನೀಡಿದೆ. ಪ್ರತೀ ತಿಂಗಳು ಐದು ಸಾವಿರ ಮನೆ ಬಾಡಿಗೆ ಕೊಡುತ್ತೇವೆ ಎಂದು ಹೇಳಿದ್ದ ಸರ್ಕಾರ ಅದನ್ನು ನೀಡಿಲ್ಲ. ಆದರೆ ಬಿಜೆಪಿಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಮಹಾರಾಷ್ಟ್ರಕ್ಕೆ ಹೋಗಲು ಸದನ ಮೊಟಕುಗೊಳಿಸಿದರು ಎಂದು ಆರೋಪಿಸಿದರು.
ಈಗಾಗಲೇ ಇಬ್ಬರು ಡಿಸಿಎಂಗಳಾದ ಲಕ್ಷ್ಮಣ್ ಸವದಿ, ಅಶ್ವಥ್ ನಾರಾಯಣ ಅವರು ಮಹಾರಾಷ್ಟ್ರ ಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗಿದ್ದಾರೆ. ನಾಳೆಯಿಂದ 2 ದಿನಗಳ ಕಾಲ ಸಿಎಂ ಬಿಎಸ್ವೈ ಅವರು ಕೂಡ ಪ್ರಚಾರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಅಧಿವೇಶನ ಮೊಟಕುಗೊಳಿಸಿರುವ ಕುರಿತು ಸದನದಲ್ಲಿ ಸ್ಪಷ್ಟನೆ ನೀಡಿದ್ದ ಸಿಎಂ ಬಿಎಸ್ವೈ ಅವರು, ರಾಜ್ಯದಲ್ಲಿ ಉಂಟಾಗಿರುವ ನೆರೆಯಿಂದ ಶಾಸಕರು ಕ್ಷೇತ್ರಗಳಲ್ಲಿರುವುದು ಅಗತ್ಯವಾಗಿದ್ದು, ಪ್ರವಾಹ ಪರಿಹಾವನ್ನು ಜನರಿಗೆ ತಲುಪಿಸಲು ಶಾಸಕರು, ಸಚಿವರು ಆಯಾ ಕ್ಷೇತ್ರಗಳಲ್ಲಿ ಇರಬೇಕಾದ ಹಿನ್ನೆಲೆಯಲ್ಲಿ ಸದನ ಮೊಟಕುಗೊಳಿಸಿದ್ದಾಗಿ ಸ್ಪಷ್ಟನೆ ನೀಡಿದ್ದರು.
ಸದ್ಯ ಸಿಎಂ ಬಿಎಸ್ವೈ ಸೇರಿದಂತೆ ಕರ್ನಾಟಕ 8 ಸಚಿವರು ಬಿಜೆಪಿ ಹೈಕಮಾಂಡ್ ಮಹಾರಾಷ್ಟ್ರ ಚುನಾವಣೆಯಲ್ಲಿ ಭಾಗಿಯಾಗಲು ಸೂಚನೆ ನೀಡಿದೆ. ಆ ಮೂಲಕ ಗಡಿ ಪ್ರದೇಶದಲ್ಲಿರುವ ಕ್ಷೇತ್ರಗಳ ಕನ್ನಡಿಗರನ್ನು ಪಕ್ಷದ ಕಡೆ ಸೆಳೆಯುವ ತಂತ್ರವನ್ನು ಮಾಡಿದ್ದಾರೆ. ಆದರೆ ಪರಿಹಾರ ಕಾರ್ಯದಲ್ಲಿ ನಿರತರಾಗಬೇಕಿದ್ದ ನಾಯಕರು ಮಹಾರಾಷ್ಟ್ರದ ಚುನಾವಣೆಯಲ್ಲಿ ಬ್ಯುಸಿಯಾಗಿರುವುದು ವಿಪಕ್ಷಗಳಿಂದ ಟೀಕೆಗೆ ಗುರಿಯಾಗಿದೆ.