ಶಿವಮೊಗ್ಗ: ಮುಂದಿನ ಬಜೆಟ್ನಲ್ಲಿ ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಕೃಷಿ ವಲಯದ ಬಲವರ್ಧನೆಗೆ ಹಾಗೂ ನೀರಾವರಿ ಕ್ಷೇತ್ರದ ಬಲವರ್ಧನೆಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಗರದ ಪಿಇಎಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದ ಪ್ರೇರಣಾ ಸಭಾಂಗಣದಲ್ಲಿ ಸಾವಯವ ಕೃಷಿಕರ ರಾಜ್ಯಮಟ್ಟದ ಸಮಾವೇಶವನ್ನು ಸಿಎಂ ಯಡಿಯೂರಪ್ಪ ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಅವರು, ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ರೈತ ಕುಟುಂಬಕ್ಕೆ ವಾರ್ಷಿಕ 6000 ರೂ.ಗಳ ಜೊತೆಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ 40000 ರೂ. ಆರ್ಥಿಕ ಸಹಾಯವನ್ನು ಒದಗಿಸುತ್ತಿದೆ. ಇದಕ್ಕಾಗಿ ರಾಜ್ಯ ಸರ್ಕಾರ 2,200 ಕೋಟಿ ರೂ. ಅನುದಾನವನ್ನು ನಿಗದಿಪಡಿಸಿದೆ ಎಂದರು.
ರೈತರಿಗೆ ಉತ್ತೇಜನ ನೀಡಲು ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಪ್ರಧಾನಮಂತ್ರಿ ಗ್ರಾಮ ಸಿಂಚಾಯಿ ಯೋಜನೆ, ಪ್ರಧಾನಮಂತ್ರಿ ಕೃಷಿ ಫಸಲ್ ಭಿಮಾ ಯೋಜನೆ, ಮಣ್ಣು ಆರೋಗ್ಯ ಚೀಟಿ ವಿತರಣೆ ಯೋಜನೆ, ಸಂಸದ ಆದರ್ಶ ಗ್ರಾಮ ಯೋಜನೆ, ಪರಂಪರಾಗತ ಕೃಷಿ ವಿಕಾಸ ಯೋಜನೆ, ಜಾನುವಾರು ವಿಮಾ ಯೋಜನೆ, ಮೀನುಗಾರಿಕೆ ತರಬೇತಿ ಮತ್ತು ವಿಸ್ತರಣೆ ಯೋಜನೆ, ಸೂಕ್ಷ್ಮ ನೀರಾವರಿ ನಿಧಿ, ಜಲಶಕ್ತಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹೀಗೆ ಹಲವು ಯೋಜನೆಗಳನ್ನು ರೈತರ ಅನುಕೂಲಕ್ಕಾಗಿ ಕಾರ್ಯರೂಪಕ್ಕೆ ತರಲಾಗಿದೆ ಎಂದು ಸಿಎಂ ಬಿಎಸ್ವೈ ತಿಳಿಸಿದರು.
ಪ್ರಧಾನಮಂತ್ರಿ ಅವರ ಆಶಯದಂತೆ 2022 ಒಳಗಾಗಿ ರೈತರು ತಮ್ಮ ಕೃಷಿ ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದು, ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ಮತ್ತು ಕೃಷಿ ಪೂರಕ ಚಟುವಟಿಕೆಗಳನ್ನು ಅಳವಡಿಸಿಕೊಳ್ಳಬೇಕು. ಪ್ರಸ್ತುತ 50 ಸಾವಿರ ಸಾವಯವ ಕೃಷಿಕ ಕುಟುಂಬಗಳು ರಾಜ್ಯದಲ್ಲಿದ್ದು, ಇವರ ಸಂಖ್ಯೆ ಮುಂದಿನ ಒಂದು ವರ್ಷದಲ್ಲಿ 5ಲಕ್ಷ ತಲುಪಬೇಕು. ಪ್ರತಿ ತಿಂಗಳು ಒಂದು ತಾಲೂಕಿನಲ್ಲಿ ರೈತರನ್ನು ಉತ್ತೇಜಿಸಲು ರೈತ ಸಮಾವೇಶವನ್ನು ಬಜೆಟ್ ಬಳಿಕ ನಡೆಸಲಾಗುವುದು ಎಂದು ಸಿಎಂಯಡಿಯೂರಪ್ಪ ತಿಳಿಸಿದರು.
ಮುಖ್ಯಮಂತ್ರಿ ಶ್ರೀ @BSYBJP ಅವರು, ಶಿವಮೊಗ್ಗದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಸಾವಯವ ಕೃಷಿಕರ ಸಮಾವೇಶ 'ಸುಭಿಕ್ಷಾ' ಕಾರ್ಯಕ್ರಮ ಉದ್ಘಾಟಿಸಿ ಸಾವಯವ ಉತ್ಪನ್ನಗಳ ಪ್ರಾತ್ಯಕ್ಷಿಕೆ ವೀಕ್ಷಿಸಿದರು.
ಉಪ ಮುಖ್ಯಮಂತ್ರಿ ಹಾಗೂ ಕೃಷಿ ಸಚಿವ @LaxmanSavadi, ಸಾವಯವ ಕೃಷಿ ಮಿಷನ್ ಅಧ್ಯಕ್ಷ ಆನಂದ್ ಉಪಸ್ಥಿತರಿದ್ದರು. pic.twitter.com/CO5SnUTZoA
— CM of Karnataka (@CMofKarnataka) December 23, 2019