ಹುಬ್ಬಳ್ಳಿ: ಪ್ರವಾಹ ಬಂದು 15 ದಿನ ಕಳೆದರೂ ಕೇಂದ್ರದಿಂದ ಒಂದು ನಯಾ ಪೈಸೆ ಬಂದಿಲ್ಲಾ. ಯಡಿಯೂರಪ್ಪ ಅವರು ಒನ್ ಮ್ಯಾನ್ ಶೋ ಮಾಡಿಕೊಂಡು ಬಂದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಪ್ರವಾಹ ಬಂದು 15 ದಿನ ಕಳೆದರೂ ಕೇಂದ್ರದಿಂದ ಒಂದು ನಯಾ ಪೈಸೆ ಬಂದಿಲ್ಲಾ. ಯಡಿಯೂರಪ್ಪ ಅವರು ಒನ್ ಮ್ಯಾನ್ ಶೋ ಮಾಡಿಕೊಂಡು ಬಂದಿದ್ದಾರೆ. ಮಂಗಳವಾರ ಮಂತ್ರಿ ಮಂಡಲ ವಿಸ್ತರಣೆಯಾಗುತ್ತದೆ ಎಂದು ಹೇಳಿದ್ದಾರೆ. ಬಹುಶಃ ಮಂತ್ರಿ ಮಂಡಲ ಇಲ್ಲದೇ ಇಷ್ಟು ದಿನ ಸರ್ಕಾರ ಇಲ್ಲದೆ ಇದ್ದದ್ದು ಮೊದಲು ಬಾರಿಯಾಗಿದೆ. ಯಡಿಯೂರಪ್ಪ ಪಿಎಂ ಅವರನ್ನು ಭೇಟಿಯಾಗಿ ಬಂದಿದ್ದಾರೆ. ಪಿಎಂ ಹಣ ಕೊಡುತ್ತೀನಿ ಎಂದು ಎಲ್ಲಿ ಆದರೂ ಹೇಳಿದ್ದಾರಾ? ಎಂದು ಪ್ರಶ್ನೆ ಮಾಡಿದರು.
ಯಡಿಯೂರಪ್ಪನವರು ಸಿದ್ದರಾಮಯ್ಯನವರ ಸಲಹೆ ಮೇರೆಗೆ ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ. ಇದು ನೂರಕ್ಕೆ ನೂರರಷ್ಟು ಸುಳ್ಳು, ಅವರ ಜೊತೆ ನಾನು ಮಾತಾಡಿಲ್ಲ. ನನ್ನ ಸಲಹೆ ಕೇಳಿದರೆ, ಆಪರೇಷನ್ ಕಮಲದಲ್ಲಿ ನೂರಾರು ಕೋಟಿ ಹಣ ಖರ್ಚುಮಾಡಿದ್ದಾರೆ. ಅದನ್ನು ಸಿಬಿಐಗೆ ಕೊಡಲಿ ಎಂದರು.
ಬಿಜೆಪಿ ಅವರಿಗೆ ಸಿಬಿಐ ಅಂದರೆ ವಾಕರಿಕೆ ಇತ್ತು. ಈಗ ಇದ್ದಕ್ಕಿದ್ದಂತೆ ಅವರ ಸರ್ಕಾರ ಬಂದಾಕ್ಷಣ ಸಿಬಿಐ ಮೇಲೆ ವ್ಯಾಮೋಹ ಬಂದಿದೆ. ನಮ್ಮ ಪೊಲೀಸರಿಂದ ತನಿಖೆ ಮಾಡಿಸಬಹುದಿತ್ತು. ಆದರೆ ಸಿಬಿಐಯನ್ನ ದುರ್ಬಳಕೆ ಮಾಡಲು ಹೊರಟಿದ್ದಾರೆ. ಆಪರೇಷನ್ ಕಮಲವನ್ನ ಸಿಬಿಐಗೆ ಕೊಡಲಿ. ಅವರು ಅದನ್ನು ಮಾಡಲ್ಲ, ಅವರು ಆ ರೀತಿ ಮಾಡಿದರೆ ನನಗೆ ಸಂತೋಷವಾಗುತ್ತದೆ. ಆಡಿಯೋ ಪ್ರಕರಣ ಬಂದಾಗ ತನಿಖೆ ಮಾಡಿಸಬೇಕಿತ್ತು. ಆಗ ಕುಮಾರಸ್ವಾಮಿ ಮಾಡಿಸಲಿಲ್ಲಾ, ಅವರು ಏಕೆ ಬಿಟ್ಟರು ಗೊತ್ತಿಲ್ಲಾ. ಆದರೆ ನಾನು ಯಾವ ಸಲಹೆಯನ್ನು ಕೊಟ್ಟಿಲ್ಲ, ಇದು ಸುಳ್ಳು ಎಂದು ಸಿದ್ದರಾಮಯ್ಯ ಹೇಳಿದರು.