ಬೆಂಗಳೂರು: ಬಿಜೆಪಿಯಲ್ಲಿ ಸಂಪುಟ ವಿಸರಣೆ ಹಲವು ವಿದ್ಯಮಾನಗಳಿಗೆ ಸಾಕ್ಷಿಯಾಗಿದೆ. ಸಂಪುಟ ವಿಸ್ತರಣೆ ನಾಳೆ ನಡೆಯಲಿದ್ದು, ಸಚಿವ ಸ್ಥಾನದ ಆಕಾಂಕ್ಷಿ ಆಗಿರೋ ಶಾಸಕ ಮಹೇಶ್ ಕುಮಟಳ್ಳಿ ಸಿಎಂಗೆ ಮುಂದೆ ಹೊಸ ಡಿಮ್ಯಾಂಡ್ ಇಟ್ಟಿದ್ದಾರೆ. ನನಗೆ ಸಚಿವ ಸ್ಥಾನ ಕೊಡದೆ ಇದ್ದರೂ ಪರವಾಗಿಲ್ಲ. ಸಿ.ಪಿ ಯೋಗೇಶ್ವರ್ ಹಾಗೂ ವಿಶ್ವನಾಥ್ಗೆ ಕೊಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.
ಶಾಸಕರ ಭವನದಲ್ಲಿ ಮಾತನಾಡಿದ ಶಾಸಕ ಮಹೇಶ್ ಕುಮಟಳ್ಳಿ, ಈ ಸರ್ಕಾರ ಬರಲು 17 ಜನರು ಕಾರಣ. ಅದರಲ್ಲಿ ಎರಡನೇ ರನ್ನರ್ ಅಪ್ ನಾನೇ. ನನಗೆ ಸ್ಥಾನ ಕೊಡದೆ ಇದ್ದರೆ ಅನ್ಯಾಯ ಆಗುತ್ತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಒಂದು ವೇಳೆ ನನಗೆ ಸ್ಥಾನ ಕೊಡದೆ ಹೋದರೂ ಪರವಾಗಿಲ್ಲ ಸಿ.ಪಿ ಯೋಗೇಶ್ವರ್, ವಿಶ್ವನಾಥ್ಗೆ ಸ್ಥಾನ ಕೊಡಿ ಎಂದು ಸಿಎಂ ಯಡಿಯೂರಪ್ಪಗೆ ಡಿಮ್ಯಾಂಡ್ ಮಾಡಿದ್ದಾರೆ.
ಯೋಗೇಶ್ವರ್ ಬಿಜೆಪಿ ಸರ್ಕಾರ ಬರಲು ಕಾಣಿಕೆ ಕೊಟ್ಟಿದ್ದಾರೆ. ಸಮ್ಮಿಶ್ರ ಸರ್ಕಾರ ಬೀಳುವಾಗ ನಮ್ಮ ಜೊತೆ ಇದ್ದವರು ಯೋಗೇಶ್ವರ್. ಬಿಜೆಪಿಗೆ ಅವರ ಕೊಡುಗೆ ಇದೆ. ಈ ಸರ್ಕಾರಕ್ಕೂ ಅವರ ಕೊಡುಗೆ ಇದೆ. ಹೀಗಾಗಿ ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡಬೇಕು. ಅದೇ ರೀತಿ ಈ ಸರ್ಕಾರಕ್ಕೆ ವಿಶ್ವನಾಥ್ ಕೊಡುಗೆ ಇದೆ. ಸೋತರು ಅಂತ ಅವರನ್ನು ಕೈ ಬಿಡಬೇಡಿ. ಅವರಿಗೂ ಮಂತ್ರಿ ಸ್ಥಾನ ಕೊಡಿ ಎಂದು ಒತ್ತಾಯ ಮಾಡಿದರು.
ಇದೇ ವೇಳೆ ಸಚಿವ ಸ್ಥಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಹೇಶ್ ಕುಮಟಳ್ಳಿ, ನನಗೆ ಸಿಎಂ ಸಚಿವ ಸ್ಥಾನ ಕೊಡುತ್ತಾರೆ ಅನ್ನೋ ವಿಶ್ವಾಸ ಇದೆ. ಸಿಎಂ ಯಡಿಯೂರಪ್ಪ ಯಾವತ್ತು ಕೊಟ್ಟ ಮಾತು ತಪ್ಪಿಲ್ಲ. ಗೆದ್ದ 11 ಜನರ ಪೈಕಿ ನನಗೆ ಯಾಕೆ ಕೊಡಲ್ಲ ಅಂತ ಸುದ್ದಿ ಬರುತ್ತಿದಿಯೋ ನನಗೆ ಗೊತ್ತಿಲ್ಲ. ಸಿಎಂ ಮಾತು ಕೊಟ್ಟಿದ್ದರು. ಹೀಗಾಗಿ ನಾನು ಮಂತ್ರಿ ಆಗುತ್ತೀನಿ ಎಂಬ ವಿಶ್ವಾದ ಇದೆ. ಮಂತ್ರಿ ಮಾಡುತ್ತಾರೆ ಅಂತ ನಂಬಿಕೆ ಇದೆ. ಒಂದು ವೇಳೆ ನನ್ನ ಹೆಸರು ಬಿಟ್ಟರೆ ನನಗೆ ಅನ್ಯಾಯವಾಗುತ್ತೆ. ಆದರೂ ಸಿಎಂ, ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ದ. ಕೊನೆ ಘಳಿಗೆಯಲ್ಲಿ ಸ್ಥಾನ ತಪ್ಪಿದರು ನಾನು ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೀನಿ ಎಂದು ತಿಳಿಸಿದರು.