ಮಂಡ್ಯ: ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ನ ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಬಿಜೆಪಿ ಸೇರಿದ್ದಾರಾ ಎಂಬ ಅನುಮಾನ ಮೂಡಿದೆ. ಯಾಕಂದರೆ ಸಿಎಂ ಯಡಿಯೂರಪ್ಪ ಅವರ ಭಾವಚಿತ್ರವುಳ್ಳ ಫ್ಲೆಕ್ಸ್ಗಳಲ್ಲಿ ನಾರಾಯಣಗೌಡರ ಫೋಟೋ ರಾರಾಜಿಸುತ್ತಿದೆ.
ಒಂದೆಡೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಗ ನಿಖಿಲ್ ಅವರನ್ನು ಕೆ.ಆರ್.ಪೇಟೆಯ ಉಪಚುನಾವಣೆಯಲ್ಲಿ ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇತ್ತ ಎಚ್ಡಿಕೆಗೆ ಟಕ್ಕರ್ ಕೊಡಲು ಕೆ.ಆರ್.ಪೇಟೆ ಬಿಜೆಪಿ ಘಟಕ ಮುಂದಾಗಿದ್ದು, ಬಸವಜಯಂತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶುಭಕೋರಿ ಅಳವಡಿಸಿರುವ ಫ್ಲೆಕ್ಸ್ಗಳಲ್ಲಿ ಬಿಎಸ್ವೈ ಜೊತೆ ನಾರಾಯಣಗೌಡರ ಫೋಟೋವನ್ನು ಹಾಕಲಾಗಿದೆ. ಆ ಫ್ಲೆಕ್ಸ್ಗಳು ಕೆ.ಆರ್.ಪೇಟೆ ಪಟ್ಟಣದಾದ್ಯಂತ ರಾರಾಜಿಸುತ್ತಿವೆ.
ಇಂದು ಸಂಜೆ ಕುಮಾರಸ್ವಾಮಿ ಅವರು ಕೆ.ಆರ್.ಪೇಟೆಗೆ ಆಗಮಿಸುತ್ತಿದ್ದಾರೆ. ಈ ವೇಳೆ ಕಾರ್ಯಕರ್ತರ ಸಭೆ ನಡೆಸಿ ಉಪಚುನಾವಣೆ ಸಿದ್ಧತೆಗೆ ಕರೆ ನೀಡುವ ಸಾಧ್ಯತೆ ಇದೆ. ಕುಮಾರಸ್ವಾಮಿ ಭೇಟಿ ಹಿನ್ನೆಲೆಯಲ್ಲಿ ಸಿಎಂ ಬಿಎಸ್ವೈ ಜೊತೆ ನಾರಾಯಣಗೌಡರ ಫೋಟೋಗಳಿರುವ ಫ್ಲೆಕ್ಸ್ ಅಳವಡಿಸಿ ಟಾಂಗ್ ಕೊಡಲು ಬಿಜೆಪಿ ಘಟಕ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೆ ನಾರಾಯಣಗೌಡ ಶಾಸಕ ಸ್ಥಾನದ ಅನರ್ಹತೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಅನರ್ಹತೆ ಪ್ರಕರಣ ಇತ್ಯರ್ಥವಾಗದಿದ್ದರೂ ಶಾಸಕರು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರ ಎಂದೇ ಫ್ಲೆಕ್ಸ್ಗಳಲ್ಲಿ ಮುದ್ರಿಸಲಾಗಿದೆ. ಈ ಮೂಲಕ ಅನರ್ಹತೆ ಪ್ರಕರಣ ಇತ್ಯರ್ಥದ ಬಳಿಕ ನಾರಾಯಣಗೌಡ ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗುತ್ತಿದೆ.