ಚಿಕ್ಕಮಗಳೂರು: ಜಿಲ್ಲೆಯಲ್ಲಿ ಪೊಲೀಸರು ಮಾಡಿದ ತಪ್ಪಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಾಧ್ಯಮಗಳ ಜೊತೆ ಕ್ಷಮೆ ಕೇಳಿದ್ದಾರೆ.
ಇಂದು ಶ್ರೀ ಗುರು ಸಿದ್ಧರಾಮೇಶ್ವರರ 847ನೇ ಜಯಂತಿಯ ಅಂಗವಾಗಿ ಸಿಎಂ ಯಡಿಯೂರಪ್ಪ ಅಜ್ಜಂಪುರಕ್ಕೆ ಆಗಮಿಸಿದ್ದರು. ಇದೇ ವೇಳೆ ವೇದಿಕೆ ಮುಂಭಾಗಕ್ಕೆ ಪತ್ರಕರ್ತರು ಹೋಗಲು ಯತ್ನಿಸಿದಾಗ ಅಲ್ಲಿದ್ದ ಪಿಎಸ್ಐ ಹಾಗೂ ಎಎಸ್ಐ ಪತ್ರಕರ್ತರನ್ನ ಒಳಗೆ ಬಿಡಲಿಲ್ಲ. ಪೊಲೀಸ್ ಇಲಾಖೆಯೇ ನೀಡಿರುವ ಪಾಸ್ ತೋರಿಸಿದರೂ ಪೊಲೀಸರು ಪತ್ರಕರ್ತರನ್ನ ಒಳಗಡೆ ಬಿಡಲಿಲ್ಲ.
ಓರ್ವ ಪೊಲೀಸ್ ವರದಿಗಾರರ ಕುತ್ತಿಗೆಗೆ ಕೈಹಾಕಿ ತಳ್ಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪರ್ತಕರ್ತರು ವೇದಿಕೆ ಮುಂಭಾಗವೇ ಧರಣಿ ಕುಳಿತರು. ಆಗ ಕಾರ್ಯಕ್ರಮ ಉದ್ಘಾಟಿಸಿ ವೇದಿಕೆಯಲ್ಲಿ ಕೂತಿದ್ದ ಸಿಎಂ ಯಡಿಯೂರಪ್ಪ ವೇದಿಕೆ ಮುಂಭಾಗಕ್ಕೆ ಬಂದು ಎಸ್ಪಿಗೆ ಕ್ಲಾಸ್ ತೆಗೆದುಕೊಂಡರು.
ಎಸ್ಪಿ ಹರೀಶ್ ಪಾಂಡೆ ವಿರುದ್ಧ ಗರಂ ಆದ ಸಿಎಂ, ನಿನ್ನನ್ನ ಸಸ್ಪೆಂಡ್ ಮಾಡಬೇಕಾಗುತ್ತೆ. ಮಾಧ್ಯಮದವರನ್ನ ಒಳಗೆ ಬಿಡೋದಕ್ಕೆ ನಿಮಗೇನು ಸಮಸ್ಯೆ. ಮೊದಲು ನಿಮ್ಮ ವರ್ತನೆಯನ್ನ ಸರಿಮಾಡಿಕೊಳ್ಳಿ ಎಂದು ವಾರ್ನಿಂಗ್ ನೀಡಿದರು. ಅಲ್ಲದೇ ಭಾಷಣ ಮಾಡುವ ವೇಳೆ ಕೂಡ ಈ ವಿಚಾರ ಪ್ರಸ್ತಾಪಿಸಿ, ಮಾಧ್ಯಮದವರ ಜೊತೆ ಪೊಲೀಸರು ಅನುಚಿತವಾಗಿ ನಡೆದುಕೊಂಡಿದ್ದಾರೆ. ನಿಮ್ಮ ಮನಸ್ಸಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ ಎಂದರು.
ಮಾಧ್ಯಮದವರಿಗೆ ಅಡ್ಡಿ ಮಾಡಬಾರದು ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು. ಮಾಧ್ಯಮದವರೊಂದಿಗೆ ಅನುಚಿತವಾಗಿ ವರ್ತಿಸಿದರೆ ಎಂತಹಾ ದೊಡ್ಡ ಅಧಿಕಾರಿಯಾದರೂ ಕ್ರಮ ಕೈಗೊಳ್ಳುತ್ತೇನೆಂದು ವೇದಿಕೆಯಲ್ಲೇ ಎಸ್ಪಿ ಹರೀಶ್ ಪಾಂಡೆಗೆ ಕ್ಲಾಸ್ ತೆಗೆದುಕೊಂಡರು. ಜೊತೆಗೆ ಮಾಧ್ಯಮದವರ ಜೊತೆ ಅನುಚಿತವಾಗಿ ವರ್ತಿಸಿದ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದರು.