ನವದೆಹಲಿ: ರಾಜ್ಯ ಸಚಿವ ಸಂಪುಟ ರಚನೆ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವ ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಗೃಹ ಸಚಿವ ಅಮಿತ್ ಶಾ ಭೇಟಿಗೆ ಸಮಯ ನೀಡಿಲ್ಲ. ಗುರುವಾರ ಮಧ್ಯಾಹ್ನದಿಂದ ಭೇಟಿಗಾಗಿ ಕಾಯುತ್ತಿದ್ದು, ಚರ್ಚೆಗೆ ಇನ್ನೂ ಸಮಯ ಸಿಕ್ಕಿಲ್ಲ.
ಗುರುವಾರ ದೆಹಲಿಗೆ ತೆರಳಿದ್ದ ಸಿಎಂ ಯಡಿಯೂರಪ್ಪ ರಾತ್ರಿ ಅಮಿತ್ ಶಾ ಅವರನ್ನ ಭೇಟಿ ಮಾಡಿದ್ದರು. ಈ ವೇಳೆ ಅಮಿತ್ ಶಾ ಚರ್ಚೆಗೆ ಉತ್ಸುಕತೆ ತೋರದೆ ಇಂದು ಭೇಟಿಗೆ ಸಮಯ ನೀಡುವುದಾಗಿ ಹೇಳಿದ್ದರು. ಆದರೆ ಇಂದು ಮೂರು ಗಂಟೆ ಸಮಯವಾದರೂ ಕೇಂದ್ರ ಗೃಹ ಕಚೇರಿಯಿಂದ ಫೋನ್ ಕಾಲ್ ಬಂದಿಲ್ಲ. ಅಮಿತ್ ಶಾ ಕಚೇರಿ ಫೋನ್ಗಾಗಿ ಕಾಯುತ್ತಿರುವ ಸಿಎಂ ದೆಹಲಿ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ.
ಎರಡು ಗಂಟೆಯ ಬಳಿಕ ಅಮಿತ್ ಶಾ ನಿರಂತರವಾದ ಕಾರ್ಯಕ್ರಮಗಳಿದ್ದು, ಬಿಎಸ್ವೈ ಭೇಟಿ ಅನುಮಾನ ಎನ್ನಲಾಗುತ್ತಿದೆ. ಮಧ್ಯಾಹ್ನ 2 ಗಂಟೆಗೆ ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ಅಮಿತ್ ಶಾ ಭಾಗಿಯಾಗಿದ್ದು, 3:30 ರ ವೇಳೆಗೆ ಎನ್ಡಿಎ ಒಕ್ಕೂಟ ಪಕ್ಷಗಳ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 5 ಗಂಟೆಗೆ ಚುನಾವಣಾ ರ್ಯಾಲಿಗಳಲ್ಲಿ ಭಾಗಿಯಾಗಲಿದ್ದು, ರಾತ್ರಿ 10 ಗಂಟೆವರೆಗೂ ಬ್ಯುಸಿಯಾಗಲಿದ್ದಾರೆ.
ಶನಿವಾರ ಕೇಂದ್ರ ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ನಾಳೆಯೂ ಅನುಮಾನ ಎನ್ನಲಾಗುತ್ತಿದ್ದು, ಇಂದೇ ಹೇಗಾದರೂ ಮಾಡಿ ಅಮಿತ್ ಶಾ ಭೇಟಿ ಮಾಡುವ ಪ್ರಯತ್ನವನ್ನು ಬಿಎಸ್ ಯಡಿಯೂರಪ್ಪ ಮಾಡುತ್ತಿದ್ದಾರೆ.