ಚಿಕ್ಕಬಳ್ಳಾಪುರ: ನನಗೆ ಸಚಿವ ಸ್ಥಾನ ಸಿಗೋದು ಪಕ್ಕಾ ಆಗಿದ್ದು, ಪ್ರಮಾಣಚನ ಸ್ವೀಕರಿಸೋಕೆ ಸಿಎಂ ಆಹ್ವಾನಿಸಿದ್ದಾರೆ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.
ಪತ್ರಕರ್ತರ ಭವನದಲ್ಲಿ ನಗರಸಭೆ ಚುನಾವಣೆ ಸಂಬಂಧ ಪ್ರಣಾಳಿಕೆ ಬಿಡುಗಡೆಗೊಳಿಸಿ ಮಾತನಾಡಿದ ಸುಧಾಕರ್, ಕ್ಷೇತ್ರದ ಜನರ ಆಶೀರ್ವಾದ, ಪ್ರೀತಿಯಿಂದ ಈಗ ನನಗೆ ಸಚಿವ ಸ್ಥಾನ ಸಿಗುತ್ತಿದೆ. ಗುರುವಾರದಂದು ಪ್ರಮಾಣವಚನ ಕಾರ್ಯಕ್ರಮಕ್ಕೆ ಬರಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳು ನನಗೆ ಆಹ್ವಾನ ನೀಡಿದ್ದಾರೆ. ಹೀಗಾಗಿ ನಾನು ಮುಖ್ಯಮಂತ್ರಿ ಯಡಿಯೂರಪ್ಪಗೆ ಕೃತಜ್ಞತೆ ಹಾಗೂ ಅಭಿನಂಧನೆಗಳನ್ನ ಅರ್ಪಿಸುತ್ತೇನೆ ಎಂದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸುಧಾಕರ್, ಎಷ್ಟೇ ಆಂತರಿಕ ಸಮಸ್ಯೆಗಳು ಹಾಗೂ ರಾಜಕೀಯ ಒತ್ತಡಗಳು ಬಂದರೂ ಕೊಟ್ಟ ಮಾತಿನಂತೆ ನುಡಿದಂತೆ ನಡೆಯುತ್ತಿರುವ ಸಿಎಂ ಯಡಿಯೂರಪ್ಪ ಅಂತ ಸಾಬೀತಾಗಿದೆ. ಸೋತಿರುವ ಎಂಟಿಬಿ ಹಾಗೂ ವಿಶ್ವನಾಥ್ ಜೊತೆ ನಾನು ರಾಜಕಾರಣದಲ್ಲಿ ಇರುವವರೆಗೂ ಅವರ ಜೊತೆಯಲ್ಲೇ ಇರುತ್ತೇನೆ. ಎಂಟಿಬಿ ಹಾಗೂ ವಿಶ್ವನಾಥ್ಗೆ ಮುಂದಿನ ದಿನಗಳಲ್ಲಿ ಒಳ್ಳೆಯದಾಗುವ ಸೂಚನೆ ಇದೆ ಎಂದರು.
ಸಿಎಂ ಯಡಿಯೂರಪ್ಪ ನಮ್ಮ ತಂಡದ ನಾಯಕರಾಗಿದ್ದು, ನಮ್ಮ ಕ್ಯಾಪ್ಟನ್ ಯಡಿಯೂರಪ್ಪ ಯಾರು ಬೇಕೋ ಅವರನ್ನ ತಮ್ಮ ತಂಡದಲ್ಲಿ ಸೇರಿಸಿಕೊಳ್ಳುತ್ತಾರೆ. ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದಂತೆ ಯಡಿಯೂರಪ್ಪ ಸರ್ಕಾರ ಸಹ ರಾಜ್ಯದಲ್ಲಿ ಜನರಿಗೆ ಒಳ್ಳೆಯ ಕಾರ್ಯಕ್ರಮಗಳನ್ನ ನೀಡುವ ಮೂಲಕ ಮಾದರಿ ಸರ್ಕಾರವಾಗಬೇಕು ಅಂತ ಆಶಯ ವ್ಯಕ್ತಪಡಿಸಿದರು.
ತಮಗೆ ಯಾವ ಖಾತೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ವೈದ್ಯಕೀಯ ಖಾತೆ, ಆರೋಗ್ಯ ಖಾತೆ, ಆ ಖಾತೆ ಈ ಖಾತೆ ಅನ್ನೋದೆಲ್ಲಾ ಊಹಾಪೋಹ. ಎಲ್ಲಾ ಖಾತೆಗಳು ಪ್ರಬಲ ಖಾತೆಗಳು, ಮಂತ್ರಿ ಆದವನು ಪ್ರಬಲನಾಗಿರಬೇಕು, ಏನು ಓದದವರು ಏನೇನೋ ಆಗಿದ್ದಾರೆ. ಹಾಗಾಗಿ ಓದಿಗೂ ಖಾತೆಗೂ ಸಂಬಂಧವಿಲ್ಲ ಎಂದರು.