ಚಾಮರಾಜನಗರ: ರಿಲ್ಯಾಕ್ಸ್ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದೂ ಕೂಡ ತಮ್ಮ ರೆಸಾರ್ಟ್ ರಾಜಕೀಯ ಮುಂದುವರೆಸಲಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸೆರಾಯ್ ರೆಸಾರ್ಟ್ನಲ್ಲಿ ಸಿಎಂ ಅವರು ರಿಲ್ಯಾಕ್ಸ್ ಮಾಡುವ ನೆಪದಲ್ಲಿ ಶುಕ್ರವಾರ ಇಡೀ ದಿನ ಚಾಮುಂಡೇಶ್ವರಿ ಹಾಗೂ ವರುಣಾ ಕ್ಷೇತ್ರದ ಮುಖಂಡರೊಂದಿಗೆ ಚುನಾವಣೆ ಬಗ್ಗೆ ರಣತಂತ್ರ ರೂಪಿಸಿದ್ದರು. ಸಚಿವ ಮಹದೇವಪ್ಪ, ಪಿರಿಯಾಪಟ್ಟಣದ ಶಾಸಕ ವೆಂಕಟೇಶ್, ಮರಿಗೌಡ, ಚೆನ್ನಾರೆಡ್ಡಿ, ಪ್ರಭಾಕರ್ ಕೆ.ವಿ, ಕೆಪಿಸಿಸಿ ಸದಸ್ಯ ನಂಜಪ್ಪ ಅವರೊಂದಿಗೆ ನಿನ್ನೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮೊದಲ ಹಂತದ ಸಭೆ ನಡೆಸಿದ್ದರು. ಬಳಿಕ ಮತ್ತೆ ಸಂಜೆ 6 ಗಂಟೆಗೆ 2ನೇ ಹಂತದ ಸಭೆ ನಡೆಸಿದ್ದಾರೆ ಎಂಬುವುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ನಿನ್ನೆ ಮೊದಲ ಹಂತ ಹಾಗೂ ಎರಡನೆಯ ಹಂತದ ಸಭೆಗಳಲ್ಲಿ ಪಾಲ್ಗೊಂಡಿದ್ದ ಮುಖಂಡರನ್ನು ಇಂದು ಒಟ್ಟಿಗೆ ಸೇರಿಸಿ ಸಭೆ ನಡೆಸಲಿದ್ದಾರೆ. ನಂತರ ಈ ಸಭೆಗಳನ್ನು ಆಧರಿಸಿ ತಮ್ಮ ಆತ್ಯಾಪ್ತರೊಂದಿಗೆ ಸಭೆ ನಡೆಸಲಿದ್ದಾರೆ. ಈ ಎಲ್ಲಾ ಬೆಳವಣಿಗೆಯ ನಂತರ ಸಿಎಂ ಮೈಸೂರಿನತ್ತ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ ಎನ್ನಲಾಗಿದೆ.