– ಮೈಸೂರು, ಚಾಮರಾಜನಗರ ಎರಡೂ ಕಡೆ ಗೆಲ್ತೀವಿ ಎಂದ ಸಿದ್ದರಾಮಯ್ಯ
ಬೆಂಗಳೂರು: ಅಮಿತ್ ಶಾ (Amit Shah) ಕರ್ನಾಟಕಕ್ಕೆ ಬರಿಗೈಯಲ್ಲಿ ಬಂದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು.
ನಗರದಲ್ಲಿ ರೈತ ಪ್ರತಿನಿಧಿಗಳ ಜತೆ ಬಜೆಟ್ ಪೂರ್ವಭಾವಿ ಸಭೆ ಬಳಿಕ ಮಾತನಾಡಿದ ಅವರು, ಇದುವರೆಗೆ ಬರಗಾಲದ ಬಗ್ಗೆ ಒಂದೇ ಒಂದು ಸಭೆಯನ್ನೂ ಮಾಡಿಲ್ಲ. ರೈತರ ಬಗ್ಗೆ, ಬಡವರ ಬಗ್ಗೆ ಮಾತಾಡಲು ಅಮಿತ್ ಶಾ ರಿಗೆ ನೈತಿಕತೆ ಇಲ್ಲ. ಬರ ಪರಿಹಾರ ಕೇಳಿ ನಾಲ್ಕು ತಿಂಗಳಾಯ್ತು. ಒಂದೂ ಸಭೆಯನ್ನೂ ಅವರು ಮಾಡಿಲ್ಲ ಎಂದು ಟೀಕಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರ ಕಾನೂನು ಉಲ್ಲಂಘನೆ ಮಾಡುವವರ ಪರವಾಗಿದೆ: ಈಶ್ವರಪ್ಪ ವಾಗ್ದಾಳಿ
ಅಮಿತ್ ಶಾ ರಾಜ್ಯಕ್ಕೆ ಬರಿಗೈಯಲ್ಲಿ ಬಂದಿದ್ದಾರೆ. ಇವತ್ತಿನವರೆಗೂ ಬರ ಬಗ್ಗೆ ಒಂದು ಸಭೆ ಮಾಡಿಲ್ಲ. ಬರ ಪರಿಹಾರ ಕೊಡಲು ಅಧ್ಯಕ್ಷರೇ ಮಿಸ್ಟರ್ ಅಮಿತ್ ಶಾ. ಇವತ್ತಿನವರೆಗೆ ಒಂದು ಸಭೆ ಮಾಡಿಲ್ಲ, ಐದು ತಿಂಗಳಾದವು. ರೈತರು ಕಷ್ಟ ಪಡ್ತಿದ್ದಾರೆ. ನೀರಿಗೆ ಸಮಸ್ಯೆ ಇದೆ, ಕೆಲಸಕ್ಕೆ ಕಷ್ಟ ಇದೆ ಎಂದು ಅಸಮಾಧಾನ ಹೊರಹಾಕಿದರು.
ನರೇಗಾದಡಿ ಬರಗಾಲ ಇದ್ದಾಗ ಕೆಲಸದ ದಿನಗಳನ್ನು 150ಕ್ಕೆ ಏರಿಸಬೇಕು. ಇದರ ಬಗ್ಗೆ ಪತ್ರ ಕೊಟ್ಟಿದ್ದೀವಿ. ಇವತ್ತಿನವರೆಗೆ ಇದಕ್ಕೂ ಅನುಮತಿ ಕೊಟ್ಟಿಲ್ಲ. ಇದೆಲ್ಲದರ ಬಗ್ಗೆ ಅಮಿತ್ ಶಾ ಅವರಿಗೆ ಮಾಧ್ಯಮಗಳು ಪ್ರಶ್ನೆ ಮಾಡಬೇಕಿದೆ. ಅವರಿಗೆ ಪ್ರಶ್ನೆ ಮಾಡಿ ಎಂದು ಹೇಳಿದರು. ಇದನ್ನೂ ಓದಿ: ಅಯೋಧ್ಯೆಯಲ್ಲಿ ಸುತ್ತೂರು ಶಾಖಾ ಮಠ ಆರಂಭಕ್ಕೆ ಚಿಂತನೆ: ಅಮಿತ್ ಶಾ
ತೆರಿಗೆ ಹಂಚಿಕೆ ಕುರಿತ ನಿರ್ಮಲಾ ಸೀತಾರಾಮನ್ ಸ್ಪಷ್ಟನೆಗೆ ದೇವೇಗೌಡರ ಬೆಂಬಲ ವಿಚಾರವಾಗಿ ಮಾತನಾಡಿ, ದೇವೇಗೌಡರು ಈಗ ಬಿಜೆಪಿಯವರ ಜತೆ ಸೇರಿಕೊಂಡಿದ್ದಾರೆ. ಅದಕ್ಕೆ ನಿರ್ಮಲಾ ಸೀತಾರಾಮನ್ ಹೇಳಿಕೆ ಸರಿ ಅಂದಿದ್ದಾರೆ. ಇದೇ ದೇವೇಗೌಡರು, ನಾನು ಮುಂದಿನ ಜನ್ಮ ಅಂತ ಇದ್ರೆ ಮುಸ್ಲಿಮನಾಗಿ ಹುಟ್ತೀನಿ ಅಂದಿದ್ರು. ಈಗ ಏನ್ ಹೇಳ್ತಾರೆ ದೇವೇಗೌಡರು ಎಂದು ಪ್ರಶ್ನಿಸಿದರು.
ನಾವು ಇದನ್ನೆಲ್ಲ ಹೇಳೋಕೆ ಹೋಗಬಾರದು. ದೇವೇಗೌಡರು ಯಜಮಾನರು, ಮಾಜಿ ಪ್ರಧಾನಿಗಳು ಹೀಗೆಲ್ಲ ಹೇಳಬಾರದು. ಬಿಜೆಪಿ ಜತೆ ಮೈತ್ರಿ ಇದೆ ಅಂತ ಅವರು ಮಾಡಿರುವ ಅನ್ಯಾಯವೆಲ್ಲ ಸರಿ ಅಂತ ಹೇಳಬಾರದು ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ಅಮಿತ್ ಶಾ ಚುನಾವಣೆ ಇದ್ದಾಗ ರಾಜ್ಯಕ್ಕೆ ಬಂದೇ ಬರ್ತಾರೆ: ಜಿ.ಪರಮೇಶ್ವರ್
ಸಿಎಂ ತವರು ಜಿಲ್ಲೆಯಿಂದ ಅಮಿತ್ ಶಾ ಚುನಾವಣಾ ರಣಕಹಳೆ ಮೊಳಗಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ರಣಕಹಳೆ ಅಂದರೇನು? ನೀವು ಬಳಸುವ ಪದ ಇದೆಯಲ್ಲ ಕಹಳೆ, ಏನದು? ನಾವು ಈ ಸಲ ಮೈಸೂರು, ಚಾಮರಾಜನಗರ ಎರಡು ಕಡೆಯೂ ಗೆಲ್ತೇವೆ ಎಂದು ತಿಳಿಸಿದರು.