ಉಡುಪಿ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬೂಟಾಟಿಕೆಗೆ ಖಾವಿ ಹಾಕೊಂಡಿದ್ದಾನೆ. ನಾನು ಯೋಗಿಗಿಂತ ಒಳ್ಳೆ ಹಿಂದೂ ಎಂದು ಹೇಳಿ ಸಿಎಂ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ಉಡುಪಿ ಜಿಲ್ಲೆ ಕಾಪುವಿನಲ್ಲಿ ನಡೆದ ಶಂಕುಸ್ಥಾಪನೆ ಮತ್ತು ಸಾಧನಾ ಸಮಾವೇಶದಲ್ಲಿ ಮಾತನಾಡಿದ ಅವರು, ಸಿಎಂ ಆದಿತ್ಯನಾಥ್ ಗೆ ಮನುಷ್ಯತ್ವ ಇಲ್ಲ. ರಾಕ್ಷಸಿ ಪ್ರವೃತ್ತಿ ವ್ಯಕ್ತಿತ್ವದ ಯೋಗಿ ಸ್ವಲ್ಪ ಸ್ವಾಮಿ ವಿವೇಕಾನಂದರನ್ನು ಓದಿಕೊಳ್ಳಲಿ. ಬೂಟಾಟಿಕೆಗೆ ಖಾವಿ ಧರಿಸಿದ್ದು, ಹಿಂದುತ್ವದ ಬಗ್ಗೆ ಏನೂ ಗೊತ್ತಿಲ್ಲ ಎಂದು ಕಟು ಪದದಲ್ಲಿ ಟೀಕಿಸಿದರು.
ಯೋಗಿ ಹಸು ಎಮ್ಮೆ ಸಾಕಿದ್ದಾನಾ? ಹಸುವಿನ ಸಗಣಿ ಎತ್ತಿ, ಗೊಬ್ಬರ ಹೊತ್ತಿದ್ದಾನಾ? ಹಸು ಸಾಕದವರು ಗೋವು ಬಗ್ಗೆ ಪಾಠ ಮಾಡುತ್ತಾರೆ. ನಾನು ಮನೆಯಲ್ಲಿ ಸಗಣಿ ಎತ್ತಿದ್ದೇನೆ, ತಲೆಮೇಲೆ ಗೊಬ್ಬರ ಹೊತ್ತಿದ್ದೇನೆ. ಯೋಗಿ ಒಬ್ಬ ಡೋಂಗಿ ವ್ಯಕ್ತಿ ಎಂದು ಲೇವಡಿ ಮಾಡಿದರು.
ನನಗೆ ಬೀಫ್ ಹಿಡಿಸಲ್ಲ. ಒಮ್ಮೆ ಬೀಫ್ ತಿಂದು ಆಮೇಲೆ ತಿಂದಿಲ್ಲ. ಯಾರಿಗೇನು ಬೇಕೋ ಅದನ್ನು ತಿನ್ನುತ್ತಾರೆ. ಯಾವುದನ್ನು ತಿನ್ನು- ಯಾವುದನ್ನು ತಿನ್ನಬೇಡ ಅನ್ನೋದಕ್ಕೆ ಇವರು ಯಾರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಕರ್ನಾಟಕದಲ್ಲಿ ಮೋದಿ ಜಾದು ನಡೆಯಲ್ಲ. ಕರ್ನಾಟಕ ಗುಜರಾತ್- ಉತ್ತರಪ್ರದೇಶ ಅಲ್ಲ. ಇದು ಬಸವಣ್ಣ, ಕನಕದಾಸ, ನಾರಾಯಣಗುರುಗಳ ನಾಡು. ಇಲ್ಲಿ ಮೋದಿ- ಶಾ ತಂತ್ರಗಳು ನಡೆಯಲ್ಲ ಎಂದು ಮತ್ತೊಮ್ಮೆ ಹೇಳಿದರು.
https://www.youtube.com/watch?v=JOr6vyVKj94