ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಭಾನುವಾರ ಬೀದರ್ ನಲ್ಲಿ ನಡೆಯೋ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಈ ಕಾರ್ಯಕ್ರಮಕ್ಕೆ ಹೋಗಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ, ನಾಳೆ ಬೀದರ್ ನಲ್ಲಿ ನಡೆಯಲಿರುವ ರೈಲ್ವೇ ಇಲಾಖೆಯ ಕಾರ್ಯಾಕ್ರಮಕ್ಕೆ ನನಗೆ ತಡವಾಗಿ ಆಹ್ವಾನ ನೀಡಿದ್ದಾರೆ. ಪ್ರಧಾನಿ ಮೋದಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲಿಸದ ಕೇಂದ್ರ ಸರ್ಕಾರ ಇದುವರೆಗೂ ನನಗೆ ಆಹ್ವಾನವೇ ನೀಡಿಲ್ಲ. ಯಾವುದೇ ಒಂದು ಯೋಜನೆಗೆ ರಾಜ್ಯ ಸರ್ಕಾರ ಅದರ ಅರ್ಧದಷ್ಟು ಹಣ ಹಾಗೂ ಜಮೀನು ಉಚಿತವಾಗಿ ನೀಡುತ್ತಿದೆ. ಆದ್ರೆ ಉದ್ಘಾಟನೆಯಾಗ್ತಿರೋದು ಮಾತ್ರ ಪ್ರಧಾನಿ ಮೋದಿಯವರಿಂದ ಅಂತ ಸಿಎಂ ಹೇಳಿದ್ರು.
ಇದನ್ನೂ ಓದಿ: 3 ದಶಕಗಳ ಕನಸು ಆಗ್ತಿದೆ ನನಸು- ನಾಳೆ ಕಲಬುರಗಿ-ಬೀದರ್ ರೈಲ್ವೆ ಯೋಜನೆಗೆ ಪ್ರಧಾನಿಯಿಂದ ಚಾಲನೆ
ರೈಲ್ವೇ ಇಲಾಖೆಯ ಈ ಕಾರ್ಯಕ್ರಮದ ಕುರಿತು ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸದೆ ನಿಗದಿ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಾರ್ಯಕ್ರಮಕ್ಕೆ ಒಂದೆರಡು ದಿನ ಇರೋವಾಗ ಕಾಟಾಚಾರದಂತೆ ರೈಲ್ವೇ ಅಧಿಕಾರಿಗಳು ಬಂದು ಆಹ್ವಾನ ನೀಡಿದ್ದಾರೆ. ತಡವಾಗಿ ಆಹ್ವಾನ ನೀಡಿದ್ದರಿಂದ ನಾನು ಬೇರೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇನೆ. ಈ ಹಿನ್ನೆಲೆಯಲ್ಲಿ ನಾನು ಬೀದರ್ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್ವಿ ದೇಶಪಾಂಡೆ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಅಂತ ಸಿಎಂ ಹೇಳಿದ್ರು.
ಆಹ್ವಾನ ನೀಡಲು ಬಂದ ರೈಲ್ವೇ ಅಧಿಕಾರಿಗಳ ಬಳಿ ಶಿಷ್ಟಾಚಾರ ಉಲ್ಲಂಘನೆಗೆ ಅಸಮಾಧಾನ ವ್ಯಕ್ತಪಡಿಸಿದ ಸಿಎಂ, ನಾನು ಕಾರ್ಯಕ್ರಮಕ್ಕೆ ಬರಲ್ಲ ಹೋಗ್ರಿ ಅಂದಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.