ಬೆಂಗಳೂರು: ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಸ್ಥಾನದ ಅವಧಿ ವಿಚಾರವಾಗಿ ಇದ್ದ ಗೊಂದಲಕ್ಕೆ ಸಿಎಂ ಸಿದ್ದರಾಮಯ್ಯ ಅವರು ತೆರೆ ಎಳೆದಿದ್ದಾರೆ. ಅಧಿಕಾರ ಬಿಡುತ್ತೇನೆ ಅಂತ ನಾನು ಎಲ್ಲೂ ಹೇಳಿಲ್ಲ ಎಂದು ಹೇಳುವ ಮೂಲಕ ಪೂರ್ಣಾವಧಿ ಸಿಎಂ ವಿಚಾರಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಳಕು (Belaku) 200ನೇ ಸಂಚಿಕೆಯ ವಿಶೇಷ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಈ ಹೇಳಿಕೆ ನೀಡಿದ್ದಾರೆ. ವಿಶೇಷ ಸಂದರ್ಶನದ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಅವರು, ನಿಮ್ಮನ್ನು ಸಿಎಂ ಮಾಡಿದ ಮೇಲೆ ಸ್ಥಾನವನ್ನು ಬಿಡಲು ಹೇಗೆ ಸಾಧ್ಯ ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಈ ಅವಧಿ ಮುಗಿದ ಮೇಲೆ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುತ್ತೇನೆ. ಆದರೆ ಅಧಿಕಾರ ಬಿಡುತ್ತೇನೆ ಅಂತ ಎಲ್ಲೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಾನು ಜನರಿಗೆ ಮತ್ತು ನಮ್ಮ ಕ್ಷೇತ್ರದಲ್ಲೂ ಹೇಳಿದ್ದೇನೆ. ಈ ಅವಧಿ ಮುಗಿದ ಮೇಲೆ ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಅಷ್ಟೆ. ಅಧಿಕಾರ ಬಿಡುತ್ತೇನೆ ಎಂದು ಹೇಳಿಲ್ಲ ಎನ್ನುವ ಮೂಲಕ ಇದುವರೆಗೆ ಇದ್ದ ಸಿಎಂ ಸ್ಥಾನದ ಗೊಂದಲಗಳಿಗೆ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಯಾರು ಸಿಎಂ ಆಗುತ್ತಾರೆ ಎಂಬ ಚರ್ಚೆ ಜೋರಾಗಿತ್ತು. ಆಗ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೆಸರು ಕೇಳಿಬಂದಿತ್ತು. ಈ ಇಬ್ಬರೂ ನಾಯಕರು ಸಿಎಂ ರೇಸ್ನಲ್ಲಿದ್ದಾರೆ ಎಂದು ಹೇಳಲಾಗಿತ್ತು. ಕೊನೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಪಟ್ಟ ಅಲಂಕರಿಸಿದರು. ಆಗಲೂ ಅವರು ಎರಡೂವರೆ ವರ್ಷ ಅವಧಿಗೆ ಸಿಎಂ ಆಗಿರುತ್ತಾರೆ. ಮತ್ತೆ ಇನ್ನರ್ಧ ಅವಧಿಗೆ ಡಿ.ಕೆ.ಶಿವಕುಮಾರ್ ಸಿಎಂ ಆಗಬಹುದು ಎಂಬ ಮಾತು ಕೂಡ ಕೇಳಿಬಂದಿತ್ತು.
ಸಿಎಂ ಸ್ಥಾನ ಅವಧಿ ವಿಚಾರದ ಗೊಂದಲಕ್ಕೆ ಸಂಬಂಧಿಸಿದಂತೆ ಬೆಳಕು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಕೇಳಲಾಯಿತು. ಈ ಅವಧಿಯಲ್ಲಿ ನಾನು ಅಧಿಕಾರ ಬಿಡಲ್ಲ ಎನ್ನುವ ಮೂಲಕ ಪೂರ್ಣಾವಧಿ ಸಿಎಂ ನಾನೇ ಎಂಬುದನ್ನು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
Web Stories