ಬೆಳಗಾವಿ: ಈ ಯತ್ನಾಳ್ ಪೆದ್ದ ಜಾಣ. ಎಲ್ಲ ಗೊತ್ತಿದ್ದೂ ಗೊತ್ತಿಲ್ಲದ ಹಾಗೆ ನಟಿಸುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಬಿಜೆಪಿ ನಾಯಕನ ಕಾಲೆಳೆದರು.
ವಿಧಾನ ಮಂಡಲ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿದ ಅವರು, ಯತ್ನಾಳ್ (Basanagouda Patil Yatnal) ಪೆದ್ದ ಜಾಣ. ಬಹಳ ಬುದ್ಧಿವಂತರು. ಅದಕ್ಕೇ ನೀವು ಕ್ರಿಟಿಕಲ್ ಇನ್ಸೈಡರ್ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕಾಲೆಳೆದರು ಸಿಎಂ. ಸಿದ್ದರಾಮಯ್ಯ ಮಾತಿಗೆ ಕೌಂಟರ್ ಕೊಟ್ಟ ಯತ್ನಾಳ್, ಸರ್ ನೀವು ಎಲ್ರೂ ಒಂದಾದ್ರೆ ನಾವೇನು ಮಾಡೋದು ಎಂದರು. ಇದನ್ನೂ ಓದಿ: ಪ್ರತಾಪ್ ಸಿಂಹ ಭಯೋತ್ಪಾದಕ – ಮೈಸೂರು ಮಹಾರಾಜ ವೃತ್ತ ಬಳಿ ಫ್ಲೆಕ್ಸ್
ನಾವು ಎರಡು, ಮೂರನೇ ದರ್ಜೆ ನಾಯಕರು. ನೀವು ಎಲ್ಲಿ ನಿಲ್ತೀರೊ, ಯಾರನ್ನ ಕೆಡವ್ತೀರೋ ಯಾರಿಗೆ ಗೊತ್ತು? ನಿಮ್ಮ ಅಡ್ಜಸ್ಟ್ಮೆಂಟ್ ನಮಗಂತೂ ಗೊತ್ತಿಲ್ಲ ಎಂದು ಸಿಎಂಗೆ ಯತ್ನಾಳ್ ಠಕ್ಕರ್ ಕೊಟ್ಟರು. ಈ ಮಾತಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಈ ಥರ ಮಾತಾಡೋಡು ಯತ್ನಾಳ್ ಮಾತ್ರ. ಅವರ ಪಕ್ಷದ ವಿರುದ್ಧವೇ ಮಾತಾಡೋದು, ಭ್ರಷ್ಟಾಚಾರ ಆರೋಪ ಮಾಡೋದು ಯತ್ನಾಳ್ ಮಾತ್ರ ಎಂದು ಹೇಳಿದರು.
ಸರ್.. ಲೆಕ್ಕ ಕೇಳಲು ಒಬ್ಬರಾದ್ರೂ ಇರಬೇಕಲ್ಲ. ಎಲ್ಲರ ಲೆಕ್ಕ ಪತ್ರ ನಾನು ಕೇಳ್ತೀನಿ. ಏನಾಗುತ್ತೊ ಆಗಲಿ. ನನಗೆ ಸ್ಥಾನಮಾನ ಸಿಗಲ್ಲ. ಏನೂ ಆಗದಿದ್ರೂ ಶಾಸಕ ಮಾತ್ರ ಆಗ್ತೇನೆ. ಯಾರೂ ತಪ್ಪಿಸೋಕೆ ಆಗಲ್ಲ. ಶಾಸಕ ಆಗೋದನ್ನು ತಪ್ಪಿಸೋಕೆ ಆದ್ರೆ ಪಕ್ಷೇತರವಾಗಿ ನಿಂತು ಎಂಎಲ್ಸಿ ಆಗಿ ಬರ್ತೀನಿ. ಎಲ್ಲರ ಬಂಡವಾಳ ಬಿಚ್ಚಿಡ್ತೀನಿ, ಬಿಡಲ್ಲ ಎಂದರು ಯತ್ನಾಳ್. ಇದನ್ನೂ ಓದಿ: ಪಡಿತರ ಅಕ್ಕಿ ಕಳ್ಳತನ ಪ್ರಕರಣ – ದೂರು ಕೊಟ್ಟ ಅಧಿಕಾರಿಯೇ ಈಗ ಆರೋಪಿ
ಈ ವೇಳೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಧ್ಯ ಪ್ರವೇಶಿಸಿ, ಹಿಂದೆ ಸಿಎಂಗೆ ನಡೆದ ಡೀಲ್ ಬಗ್ಗೆ ಹೇಳಿ ಎಂದು ಕೇಳಿದರು. ಅದಕ್ಕೆ ಯತ್ನಾಳ್, ಸಮಯ ಬಂದರೆ ಎಲ್ಲವನ್ನೂ ಮತ್ತು ಎಲ್ಲರದ್ದನ್ನೂ ಹೇಳುತ್ತೇನೆ ಎಂದರು. ‘ನಿಮಗೆ ಅನಿಸಿದ್ದನ್ನು ಎಲ್ಲವನ್ನೂ ನೀವು ಹೇಳ್ತೀರಾ. ಅದಕ್ಕೆ ಕ್ರಿಟಿಕಲ್ ಇನ್ಸೈಡರ್ ಅಂದಿದ್ದು’ ಎಂದು ಸಿದ್ದರಾಮಯ್ಯ ಹೊಗಳಿದರು.
ಹಿಂದುಳಿದ ತಾಲೂಕುಗಳಲ್ಲಿ ಕನಕಪುರ ಇದ್ದ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆಯೊಂದನ್ನು ಮುಂದಿಟ್ಟರು. ಅದಕ್ಕೆ ಸಿದ್ದರಾಮಯ್ಯ, ಹೌದಪ್ಪ.. ಕನಕಪುರ ಇರಬಾರದಾ? ನೀನು ಹೋಗಿ ಅಲ್ಲಿ ಸ್ಪರ್ಧೆ ಮಾಡಿದ್ದು, ಅದು ಹಿಂದುಳಿದ ತಾಲ್ಲೂಕು ಅಂತಾ ತಾನೆ? ಹಿಂದುಳಿದ ತಾಲೂಕು, ಜನ ವೋಟ್ ಹಾಕಿಬಿಡ್ತಾರೆ ಅಂತಾ ಹೋಗಿ ನೀನು ನಿಂತೆ ಎಂದು ಸಿಎಂ ಹೇಳಿದರು. ಅದಕ್ಕೆ ಅಶೋಕ್ ಪ್ರತಿಕ್ರಿಯಿಸಿ, ಹೈಕಮಾಂಡ್ ಹೇಳಿದ್ದು ಅಂತಾ ನಿಂತುಕೊಂಡೆ. ಸೋಲ್ತೀನಿ ಅಂತಾ ಗೊತ್ತಿದ್ದರೂ ಹೋಗಿ ನಿಂತೆ ಎಂದರು. ಅದಕ್ಕೆ ಸಿದ್ದರಾಮಯ್ಯ, ಡೆಪಾಸಿಟ್ ಹೋಯ್ತಾ, ಇಲ್ವಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮಹಿಳೆ ಅರೆಬೆತ್ತಲೆ ಪ್ರಕರಣ – ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚನೆ