ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ದ ಮತ್ತೆ ಸಿಎಂ ಸಿದ್ದರಾಮಯ್ಯ (Siddaramaiah) ಕಿಡಿಕಾರಿದ್ದಾರೆ. ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಸಿಎಂ, 10 ವರ್ಷ ಅನ್ಯಾಯದ ಕಾಲ ಎಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಕಳೆದ ಹತ್ತು ವರ್ಷಗಳ ಬಿಜೆಪಿ (BJP) ಆಡಳಿತವನ್ನು ನರೇಂದ್ರ ಮೋದಿಯವರು (Narendra Modi) ಮತ್ತು ಬಿಜೆಪಿಯ ನಾಯಕರು ಅಮೃತ ಕಾಲ ಎಂದು ಬಣ್ಣಿಸುತ್ತಿದ್ದಾರೆ. ವಾಸ್ತವದಲ್ಲಿ ಇದು ಭಾರತದ ವಿನಾಶ ಕಾಲ. ಈ ಅವಧಿಯಲ್ಲಿ ದೇಶದ ರೈತರು,ಕಾರ್ಮಿಕರು, ಮಹಿಳೆಯರು,ಯುವಜನರು, ಶೋಷಿತರು ಮತ್ತು ಜನಸಾಮಾನ್ಯರು ಎದುರಿಸುತ್ತಿರುವ ಕಷ್ಟ ಕಾರ್ಪಣ್ಯಗಳು ಐದರಿಂದ ಹತ್ತು ಪಟ್ಟು ಹೆಚ್ಚಾಗಿದೆ.
ಹತ್ತು ವರ್ಷಗಳ ಹಿಂದೆ ನರೇಂದ್ರ ಮೋದಿ ಅವರು ಈ ದೇಶದ ಮತದಾರರಿಗೆ ನೀಡಿದ್ದ ಒಂದೇ ಒಂದು ಭರವಸೆಯನ್ನು ಕೂಡ ಪೂರ್ಣ ಪ್ರಮಾಣದಲ್ಲಿ ಈಡೇರಿಸಿಲ್ಲ. ರೈತರ ಆದಾಯದ ದುಪ್ಪಟ್ಟು, ಯುವಜನರಿಗೆ ವಾರ್ಷಿಕ 2 ಕೋಟಿ ಉದ್ಯೋಗ, ಮಹಿಳೆಯರಿಗೆ ರಕ್ಷಣೆ, ಕಾರ್ಮಿಕರಿಗೆ ಉದ್ಯೋಗ ಭದ್ರತೆ, ಶೋಷಿತ ಸಮುದಾಯಗಳಿಗೆ ರಕ್ಷಣೆ, ಅಗ್ಗದ ದರದಲ್ಲಿ ಅಗತ್ಯವಸ್ತುಗಳ ಪೂರೈಕೆ ಮೊದಲಾದ ಬಣ್ಣಬಣ್ಣದ ಭರವಸೆಗಳನ್ನು ನೀಡಿ ಮೋದಿಯವರು ಚುನಾವಣೆಯಲ್ಲಿ ಗೆದ್ದಿದ್ದರು. ಗೆದ್ದ ನಂತರ ಜನರಿಗೆ ನೀಡಿದ್ದ ಭರವಸೆಗಳನ್ನು ಮರೆತು ದೇವರು-ಧರ್ಮದ ಹೆಸರಿನ ಭಾವನಾತ್ಮಕ ರಾಜಕಾರಣ, ಉದ್ಯಮಿಗಳ ತುಷ್ಠೀಕರಣದಲ್ಲಿ ಮುಳುಗಿ ಹೋಗಿದ್ದಾರೆ. ಇದನ್ನೂ ಓದಿ: ಕೆಂಗಲ್ ಹನುಮಂತಯ್ಯ ದಕ್ಷ ಆಡಳಿತಗಾರ: ಸಿದ್ದರಾಮಯ್ಯ
ಕಳೆದ ಹತ್ತು ವರ್ಷಗಳ ನರೇಂದ್ರ ಮೋದಿಯವರ ಅನ್ಯಾಯಕಾಲದ ವಿವರಗಳನ್ನು ಅಂಕಿಅಂಶಗಳ ಸಹಿತ ಕರ್ನಾಟಕದ ಜನತೆಯ ಮುಂದೆ ಇಡುತ್ತಿದ್ದೇನೆ. ದೇಶ ಇಂದು ಅಮೃತ ಕಾಲದಲ್ಲಿ ಇದೆಯೋ? ಅನ್ಯಾಯದ ಕಾಲದಲ್ಲಿ ಇದೆಯೋ? ಎಂದು ಜನರೇ ತೀರ್ಮಾನಿಸಲಿ ಎಂದು ಸಿಎಂ ಕಿಡಿಕಾರಿದ್ದಾರೆ.