ಕೊಪ್ಪಳ: ಜಿಲ್ಲೆಯಲ್ಲಿ ಬಲ್ಡೋಟಾ ಕಾರ್ಖಾನೆ ವಿಸ್ತರಣೆ ಕೆಲಸ ನಿಲ್ಲಿಸುವಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಕೊಪ್ಪಳ (Koppal) ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.
ದೂರವಾಣಿ ಮೂಲಕ ಕೊಪ್ಪಳ ಜಿಲ್ಲಾಧಿಕಾರಿ ಜೊತೆ ಸಿಎಂ ಮಾತನಾಡಿ ಕಾರ್ಖಾನೆ ಕೆಲಸವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಕೊಪ್ಪಳದಲ್ಲಿ ಬಲ್ಡೋಟಾ ಕಾರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿ, ಕೊಪ್ಪಳದ ಶಾಸಕರು, ಜನಪ್ರತಿನಿಧಿಗಳ ಸರ್ವಪಕ್ಷ ನಿಯೋಗ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದರು.ಇದನ್ನೂ ಓದಿ: ಮದುವೆಯಾದ 6 ತಿಂಗಳಿಗೆ ಟೆಕ್ಕಿ ಆತ್ಮಹತ್ಯೆ – ಪತಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ
ಕಾವೇರಿ ನಿವಾಸದಲ್ಲಿ ಭೇಟಿ ಮಾಡಿದ ನಿಯೋಗ ಕಾರ್ಖಾನೆ ಸ್ಥಾಪನೆ ಅವಕಾಶ ಮಾಡಿಕೊಡಬಾರದೆಂದು ಮನವಿ ಮಾಡಿತು. ಸಚಿವ ಶಿವರಾಜ್ ತಂಗಡಗಿ (Shivaraj Tangadagi) ನೇತೃತ್ವದ ನಿಯೋಗದಲ್ಲಿ ಬಿಜೆಪಿ ಶಾಸಕರೂ ಭಾಗಿಯಾಗಿದ್ದರು. ಬಲ್ಡೋಟಾ ಕಾರ್ಖಾನೆ ವಿರೋಧಿ ಹೋರಾಟಗಾರರ ನಿಯೋಗದ ಮನವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ.
ಇನ್ನೂ ಸಿಎಂ ಭೇಟಿ ಬಳಿಕ ವಿಧಾನಸೌಧದಲ್ಲಿ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಕೊಪ್ಪಳ ನಗರಕ್ಕೆ ಹೊಂದಿಕೊಂಡು ಉಕ್ಕಿನ ಕಾರ್ಖಾನೆ ನಿರ್ಮಾಣ ಮಾಡಬಾರದೆಂದು ಜಿಲ್ಲೆಯ ಜನರು, ಜನಪ್ರತಿನಿಧಿಗಳು ಪ್ರತಿಭಟನೆ ಮಾಡಿ, ಸರ್ಕಾರಕ್ಕೆ ಮನವಿಯನ್ನ ಕೊಟ್ಟಿದ್ದರು. ನಾನು ಜಿಲ್ಲಾಮಂತ್ರಿಯಾಗಿ ಮನವಿ ಸ್ವೀಕಾರ ಮಾಡಿದ್ದೆ. ಈ ಕಾರ್ಖಾನೆ 2006ರಲ್ಲಿ ಪ್ರಾರಂಭವಾಗಿದ್ದು, ಆಗ ರೈತರು ಜಮೀನು ಕೊಟ್ಟಿದ್ದಾರೆ. ಯಾರಿಂದ ಸಮಸ್ಯೆ ಆಗಿದೆ ಎನ್ನುವುದನ್ನು ನಾನು ಹೇಳುವುದಿಲ್ಲ. ರಾಜಕೀಯ ಮಾಡುವ ಇಚ್ಛೆ ನನಗಿಲ್ಲ. ಪಕ್ಷಾತೀತವಾಗಿ ನಾವು ಇಂಡಸ್ಟ್ರಿ ವಿಸ್ತರಣೆಗೆ ವಿರೋಧ ಇದ್ದೇವೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ನ ಜನಪ್ರತಿನಿಧಿಗಳು ಕೂಡ ವಿರೋಧ ಮಾಡಿದ್ದಾರೆ. ಗವಿಮಠದ ಶ್ರೀಗಳು ಕೂಡ ನಮಗೆ ಬೆಂಬಲಿಸಿದ್ದಾರೆ. ಸಿಎಂ ಬಳಿಯೂ ನಾವು ಮಾತುಕತೆ ಮಾಡಿ ಮನವಿ ನೀಡಿದ್ದೇವೆ ಎಂದು ವಿವರಿಸಿದರು.ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಯಿಂದ ಗುಜರಾತ್ ವಂತಾರದಲ್ಲಿ ವನ್ಯಜೀವಿ ಪುನವರ್ಸತಿ ಸಂರಕ್ಷಣಾ ಕೇಂದ್ರ ಉದ್ಘಾಟನೆ