ಉಡುಪಿ: ಕಲ್ಲಡ್ಕ ಶಾಲೆಗಳು ಸರ್ಕಾರಿ ಶಾಲೆಗಳಲ್ಲ, ಅನುದಾನಿತ ಶಾಲೆಗಳು ಅಲ್ಲ. ಇವು ಖಾಸಗಿ ಶಾಲೆಗಳಾಗಿದ್ದು, ಅವುಗಳಿಗೆ ಏಕೆ ಸರ್ಕಾರ ಊಟ ಪೂರೈಕೆ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.
ಇಂದು ಉಡುಪಿ ಸಮಾವೇಶದಲ್ಲಿ ಭಾಗವಹಿಸಲು ಬೈಂದೂರಿಗೆ ಆಗಮಿಸಿದ್ದ ಸಿಎಂ ಸಿದ್ದರಾಮಯ್ಯ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಕಲ್ಲಡ್ಕ ಶಾಲೆಗಳಿಗೆ ಕೊಲ್ಲೂರು ದೇವಸ್ಥಾನದಿಂದ ನೀಡಲಾಗುತ್ತಿದ್ದ ಊಟ ವ್ಯವಸ್ಥೆ ನಿಲ್ಲಿಸಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿರುವ ಕುರಿತು ಪ್ರತಿಕ್ರಿಯೆ ನೀಡಿ, ಕಲ್ಲಡ್ಕ ಶಾಲೆಗಳು ಸರ್ಕಾರಿ ಶಾಲೆಗಳಲ್ಲ, ಅನುದಾನಿತ ಶಾಲೆಗಳು ಅಲ್ಲ. ಇವು ಖಾಸಗಿ ಶಾಲೆಗಳಾಗಿದ್ದು, ಅವುಗಳಿಗೆ ಏಕೆ ಸರ್ಕಾರ ಊಟ ಪೂರೈಕೆ ಮಾಡಬೇಕು. ಅದರ ಬದಲು ಬೇರೆ ಶಾಲೆಗೆ ಕೊಡಬಹುದಲ್ಲ ಎಂದು ಪ್ರಶ್ನಿಸಿದರು.
ಕೊಲ್ಲೂರು ದೇವಸ್ಥಾನದಿಂದ ಸಾಧನಾ ಸಮಾವೇಶಕ್ಕೆ ಊಟ ಪೂರೈಕೆ ಮಾಡುತ್ತಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಊಟ ಎಲ್ಲಿಂದ ಪೂರೈಕೆ ಆಗುತ್ತಿದೆ ಎಂಬುವುದು ಗೊತ್ತಿಲ್ಲ. ಊಟ ಎಲ್ಲಿಂದ ಬಂದರು ಊಟನೇ ಅಲ್ವಾ ಎಂದು ಸಮಜಾಯಿಷಿ ನೀಡಿದರು.
ಇದೇ ವೇಳೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಸಿಎಂ ಸಿದ್ದರಾಮಯ್ಯ, ಕರಾವಳಿಯ ಸದ್ಯದ ಪರಿಸ್ಥಿತಿ ಗೆ ಕೋಮುವಾದಿಗಳು ಕಾರಣ. ಬಿಜೆಪಿಯವರು ಮನುಷ್ಯರೇ ಅಲ್ಲ. ಬಿಜೆಪಿಯವರು ಹಿಂದೂಗಳೂ ಅಲ್ಲ ಮನುಷ್ಯರೂ ಅಲ್ಲ. ನಾವು ಹಿಂದೂ ವಿರೋಧಿ ಅಂದವರು ಯಾರು? ಹಿಂದುತ್ವ ಆಹಾರದಿಂದ ನಿರ್ಧರಿಸಲು ಆಗಲ್ಲ. ಯುಪಿ ಜಂಗಲ್ ರಾಜ್, ಯೋಗಿ ಜಂಗಲ್ ರಾಜ್ ಮುಖ್ಯಮಂತ್ರಿ. ಆದರೆ ನಾವು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿ ಇದ್ದೇವೆ. ಬಿಹಾರ-ಯುಪಿ ಕಾನೂನು ಸುವ್ಯವಸ್ಥೆ ಇಲ್ಲದ ರಾಜ್ಯಗಳು. ನಾನು ಕರ್ನಾಟಕದ ಮಣ್ಣಿನ ಮಗ. ನನಗೆ ಬುದ್ಧಿ ಹೇಳಿಕೊಡುವ ಅಗತ್ಯವಿಲ್ಲ. ಯೋಗಿ ಆದಿತ್ಯನಾಥ್ ಗೆ ಇತಿಹಾಸ ಗೊತ್ತಿಲ್ಲ. ಅವರಿಂದ ನಾನು ಹಿಂದುತ್ವ ಕಲಿಯುವ ಅಗತ್ಯವಿಲ್ಲ, ಕೋಮು ದ್ವೇಷದ ವಿಷಬೀಜ ಭಿತ್ತಲು ಯೋಗಿ ಕರ್ನಾಟಕಕ್ಕೆ ಬರುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಂದು ಕಲ್ಲಡ್ಕ ಶಾಲೆ ಮಕ್ಕಳಿಗೆ ಬಿಸಿಯೂಟ ಕಟ್- ಈಗ ಕಾಂಗ್ರೆಸ್ ಸಮಾವೇಶಕ್ಕೆ ಕೊಲ್ಲೂರು ದೇಗುಲದ ಆಹಾರ, ಜನರ ಆಕ್ರೋಶ
ಕರಾವಳಿಯಲ್ಲಿನ ಘಟನೆಗಳಿಗೆ ಸಂಘ ಪರಿವಾರದ ಕುಮ್ಮಕ್ಕು ನೀಡುತ್ತಿದೆ. ಆದರೆ ಸರ್ಕಾರ ಯಾವುದೇ ಸಂಘಟನೆ ನಿಷೇಧ ಬಗ್ಗೆ ಚರ್ಚೆ ಆಗಿಲ್ಲ. ಪಿಎಫ್ಐ, ಭಜರಂಗದಳ, ಶ್ರೀ ರಾಮಸೇನೆ ಮೆಲೆ ನಿಗಾ ಇಡಲು ಹೇಳಿದ್ದೇನೆ ಎಂದರು.
ಇನ್ನು ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೋದಿ ಮುಂದೆ ಮಾತಾಡುವ ಧೈರ್ಯ ರಾಜ್ಯದ ಬಿಜೆಪಿ ನಾಯಕರಿಗೆ ಇಲ್ಲ. ಪ್ರಧಾನಿ ಮುಂದೆ ಬಿಎಸ್ ವೈ, ಶೆಟ್ಟರ್, ಡಿವಿಎಸ್ ತುಟಿಪಿಟಿಕ್ ಹೇಳಲ್ಲ. ಜೆಡಿಎಸ್ ನಾಯಕ ರೇವಣ್ಣ ಮಾತೇ ಎತ್ತಿಲ್ಲ. ಸರ್ವಪಕ್ಷ ಸಭೆಯಲ್ಲಿ ಶೆಟ್ಟರ್, ಈಶ್ವರಪ್ಪ ಉಸಿರೆತ್ತಿಲ್ಲ. ರೈತರ ಬಗ್ಗೆ ಬಿಜೆಪಿ- ಜೆಡಿಎಸ್ ಗೆ ಕಾಳಜಿಯಿಲ್ಲ. ಯಡಿಯೂರಪ್ಪ ಹಸಿರು ಶಾಲು ಹಾಕಿ ರೈತರ ಮೇಲೆ ಗುಂಡು ಹಾರಿಸಿ ಇಬ್ಬರು ರೈತರನ್ನು ಕೊಂದು ಹಾಕಿದರು ಎಂದು ವಿರೋಧಿ ಪಕ್ಷಗಳ ನಾಯಕರ ವಿರುದ್ಧ ಕಿಡಿಕಾರಿದರು.