ಚಂಡೀಗಢ: ಡಿಸ್ಕೋದಲ್ಲಿ ಮಹಿಳೆಯನ್ನು ಚುಡಾಯಿಸುತ್ತಿದ್ದವರನ್ನು ತಡೆದಿದ್ದಕ್ಕೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಸೆಕ್ಯೂರಿಟಿಯನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಭಾನುವಾರ ಪಂಜಾಬ್ನ ಮೋಹಲಿಯಲ್ಲಿ ನಡೆದಿದೆ.
ಸುಖ್ವಿಂದರ್ ಕುಮಾರ್ (25) ಕೊಲೆಯಾದ ಸೆಕ್ಯೂರಿಟಿ. ಸುಖ್ವಿಂದರ್ ಅವರನ್ನು ಪಂಜಾಬ್ ಪೊಲೀಸರ ನಾಲ್ಕನೇ ಕಮಾಂಡೋ ಬೆಟಾಲಿಯನ್ ಆಗಿ ಪೋಸ್ಟ್ ಮಾಡಲಾಗಿತ್ತು. ಭಾನುವಾರ ಡಿಸ್ಕೋದಲ್ಲಿ ಮಹಿಳೆಯನ್ನು ಚುಡಾಯಿಸಿದ್ದನ್ನು ತಡೆದಿದ್ದಕ್ಕೆ ಆರೋಪಿ ಚರಣ್ಜಿತ್ ಸಿಂಗ್ ಅಲಿಯಾಸ್ ಸಾಹಿಲ್ ಸಾಗರ್, ಸುಖ್ವಿಂದರ್ ನನ್ನು ಮೂರು ಬಾರಿ ಗುಂಡಿಕ್ಕಿ ಕೊಲೆ ಮಾಡಿದ್ದಾನೆ.
ಕ್ಲಬ್ನಲ್ಲಿದ್ದ ಮಹಿಳೆಯರಿಗೆ ಕಿರುಕುಳ ನೀಡದಂತೆ ಸುಖ್ವಿಂದರ್ ಅವರು ಆರೋಪಿ ಚರಣ್ಜಿತ್ ಸಿಂಗ್ನನ್ನು ತಡೆದಿದ್ದರು. ಈ ವೇಳೆ ಚರಣ್ಜಿತ್ ಹಾಗೂ ಸುಖ್ವಿಂದರ್ ಕುಮಾರ್ ನಡುವೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ಈ ಕೊಲೆ ನಡೆದಿದೆ.
ಚರಣ್ಜಿತ್ ಸಿಂಗ್ ತನ್ನ ಸ್ನೇಹಿತೆ ಹಾಗೂ ಇಬ್ಬರು ಸ್ನೇಹಿತರ ಜೊತೆ ಕ್ಲಬ್ಗೆ ಬಂದಿದ್ದನು. ಈ ವೇಳೆ ಚರಣ್ಜಿತ್ ಕ್ಲಬ್ನಲ್ಲಿ ಇದ್ದ ಮಹಿಳೆಯನ್ನು ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದನು. ಇದನ್ನು ನೋಡಿದ ಸುಖ್ವಿಂದರ್ ಆರೋಪಿ ಚರಣ್ಜಿತ್ನನ್ನು ಈ ರೀತಿ ಮಾಡದಂತೆ ತಡೆದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಚರಣ್ಜಿತ್ ಅಸಭ್ಯವಾಗಿ ವರ್ತಿಸುವುದನ್ನು ನಿಲ್ಲಿಸದಿದ್ದಾಗ ಸುಖ್ವಿಂದರ್ ಮಧ್ಯ ಪ್ರವೇಶಿಸಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆಯಿತು. ಈ ಗಲಾಟೆಯ ನಂತರ ಕ್ಲಬ್ ಸಿಬ್ಬಂದಿ ಚರಣ್ಜಿತ್ ಸಿಂಗ್ ಹಾಗೂ ಆತನ ಸ್ನೇಹಿತರಿಗೆ ಹೊರ ಹೋಗುವಂತೆ ಹೇಳಿದ್ದರು.
ಗಲಾಟೆ ನಂತರ ಚರಣ್ಜಿತ್ ಕ್ಲಬ್ನಿಂದ ಹೊರ ಬಂದು ಸುಖ್ವಿಂದರ್ ಗಾಗಿ ಕಾಯುತ್ತಿದ್ದನು. ಸುಖ್ವಿಂದರ್ ಹೊರ ಬರುತ್ತಿದ್ದಂತೆ ಚರಣ್ಜಿತ್ ಅವರ ಜೊತೆ ಪಾರ್ಕಿಂಗ್ನಲ್ಲಿ ಜಗಳವಾಡಿದ್ದಾನೆ. ಈ ವೇಳೆ ಚರಣ್ಜಿತ್ ಗನ್ ತೆಗೆದು ಸುಖ್ವಿಂದರ್ನನ್ನು ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ.