– ಕೇಂದ್ರ ಬಜೆಟ್ ಜನ, ರೈತ ವಿರೋಧಿ
ಬೆಂಗಳೂರು: ಕೇಂದ್ರ ಬಜೆಟ್ ನಲ್ಲಿ ಏನೇನೂ ಇಲ್ಲ. ಹೆಚ್ಚಿನ ಮತ ನೀಡಿ ಜನ ಗೆಲ್ಲಿಸಿ ಕಳಿಹಿಸಿದರೂ, ಜನರಿಗೆ ತಕ್ಕಂತೆ ಕೊಡುಗೆ ನೀಡಿಲ್ಲ. ಜನ ವಿರೋಧಿ ಬಜೆಟ್ ಅನ್ನು ಕೇಂದ್ರ ಸರ್ಕಾರ ಮಂಡಿಸಿದೆ ಎಂದು ಸಿಎಂ ಕಿಡಿಕಾರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ಜನ ವಿರೋಧಿ, ರೈತ ವಿರೋಧಿ ಬಜೆಟ್ ಆಗಿದೆ. ನೇರವಾಗಿ ಯಾವುದೇ ಪ್ರಯೋಜನವಾಗಿಲ್ಲ. ಬಜೆಟ್ನಲ್ಲಿ ಪೆಟ್ರೋಲ್ ಸೆಸ್ ಏರಿಕೆ ಮಾಡಲಾಗಿದೆ. ಇದು ಜನಸಾಮಾನ್ಯರ ಮೇಲೂ ಪರಿಣಾಮ ಬೀರಲಿದೆ. ಜನಸಾಮಾನ್ಯರಿಗೆ ಯಾವುದೇ ಹೊಸ ಉಪಯೋಗವಿಲ್ಲ. ಸೋಶಿಯಲ್ ಸೆಕ್ಟರ್ಗೆ ಅವಕಾಶ ನೀಡಬೇಕಿತ್ತು. ಉದ್ಯೋಗ, ನೀರಾವರಿಗೂ ಈ ಬಾರಿ ಅವಕಾಶ ನೀಡಿಲ್ಲ ಎಂದು ಕಿಡಿಕಾರಿದರು.
ನಾವು ಏನು ಮಾಡಿದರೂ ನಡೆಯುತ್ತೆ ಎನ್ನುವ ಧೋರಣೆ ಕೇಂದ್ರ ಸರ್ಕಾರದ್ದು. ಈ ಬಾರಿ ಬಜೆಟ್ನಲ್ಲಿ ರಾಜ್ಯಕ್ಕಂತೂ ಯಾವುದೇ ಹೊಸ ಯೋಜನೆ ನೀಡಿಲ್ಲ. ಕಳೆದ ಬಾರಿಯೂ ಅನ್ಯಾಯ, ಈ ಬಾರಿಯೂ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಬಜೆಟ್ ಜನಸಾಮಾನ್ಯರ ನಿರೀಕ್ಷೆ ಹುಸಿ ಮಾಡಿದೆ. ಜನ ಇಡೀ ದೇಶದಲ್ಲಿ ಬಿಜೆಪಿಯನ್ನು ಬೆಂಬಲಿಸಿದರು. ಆದರೆ ಬಿಜೆಪಿ ಜನರ ನಿರೀಕ್ಷೆ ಉಳಿಸಿಕೊಂಡಿಲ್ಲ. ಗ್ರಾಮೀಣಾಭಿವೃದ್ಧಿ, ಉದ್ಯೋಗ, ಕೃಷಿಗೆ ಇನ್ನೂ ಹೆಚ್ಚಿನ ಅನುದಾನ ಕೊಡಬಹುದಿತ್ತು. ರೈತರ ಸಾಲ ಮನ್ನಾ ಮಾಡುವ ನಿರೀಕ್ಷೆ ಇತ್ತು. ಬಿಜೆಪಿ ಯಾವತ್ತೂ ರೈತ ವಿರೋಧಿಯೇ ಎಂದು ಹರಿಹಾಯ್ದರು.
ಪೆಟ್ರೋಲ್, ಡೀಸಲ್ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಕೇಂದ್ರ ಹೊರೆ ಹೆಚ್ಚು ಮಾಡಿದೆ. ಮುಂದಿನ ಬಜೆಟ್ನಲ್ಲಾದರೂ ಜನಸಾಮಾನ್ಯರ ನಿರೀಕ್ಷೆಗೆ ತಕ್ಕಂತೆ ಬಜೆಟ್ ಮಂಡಿಸಲಿ ಎಂದು ಅಸಮಾಧಾನ ಹೊರಹಾಕಿದರು.