ಬೆಂಗಳೂರು: ಎರಡೂವರೆ ತಿಂಗಳ ಬಳಿಕ, ಲೋಕಸಭೆ ಚುನಾವಣೆ ನಂತರ ರಾಜ್ಯ ಸಚಿವ ಸಂಪುಟ ಸಭೆ ಇಂದು ನಡೆಯಲಿದೆ.
ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಂಪುಟ ಸಭೆಯಲ್ಲಿ ಬರದ ವಿಚಾರ, ಬರ ಪರಿಹಾರ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಯಲಿದೆ. ಬರ ಪರಿಹಾರಕ್ಕಾಗಿ ಸಚಿವರ ತಂಡ ನೇಮಿಸಿ ಕಾರ್ಯಾಚರಣೆ ನಡೆಸಲು ಸೂಚಿಸುವ ಸಾಧ್ಯತೆಯಿದೆ.
ನೀತಿ ಸಂಹಿತೆ ಸಡಿಲಿಸಿ ಬರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಹೀಗಾಗಿ ಕೆಲ ತುರ್ತು ಕಾಮಗಾರಿಗಳಿಗಷ್ಟೇ ಅನುಮೋದನೆ ನೀಡಲು ಸಂಪುಟಕ್ಕೆ ಅಧಿಕಾರವಿದೆ. ಗ್ರಾಮೀಣಾಭಿವೃದ್ಧಿ, ಕಂದಾಯ, ಡಿಪಿಎಆರ್ಗೆ ಸಂಬಂಧಿಸಿದ ಇಲಾಖೆಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಒಟ್ಟಾರೆ 52 ವಿಷಯಗಳ ಬಗ್ಗೆ ಚರ್ಚೆ ನಡೆಸಿ ಹಲವು ನಿರ್ಧಾರಗಳನ್ನ ಪೆಂಡಿಂಗ್ ಇಡುವ ಸಾಧ್ಯತೆಯಿದೆ.
ಸಿಎಂ ಮೇಲೆ ಅಸಮಾಧಾನ:
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ಈಗ ಸಂಪುಟ ಸದಸ್ಯರು ಸಹ ಅಸಮಾಧಾನಗೊಂಡಿದ್ದಾರೆ ಎನ್ನುವ ವಿಚಾರ ಈಗ ತಿಳಿದು ಬಂದಿದೆ. ಸಿಎಂ ಅವರಿಗೆ ದೇವಾಲಯಗಳನ್ನು ಸುತ್ತಲೂ ಸಮಯವಿದೆ. ಆದರೆ ನಮ್ಮ ಇಲಾಖೆಯ ಸಮಸ್ಯೆಯ ಬಗ್ಗೆ ಚರ್ಚೆ ಮಾಡಲು ಸಮಯವಿಲ್ಲ ಎಂದು ಕೆಲ ಸಚಿವರು ತಮ್ಮ ಆಪ್ತರ ಜೊತೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಹೀಗಾಗಿ ಕೆಲ ಸಚಿವರ ಜೊತೆ ಅವರ ಖಾತೆಗೆ ಸಂಬಂಧಿಸಿದ ವಿಚಾರದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.