ಮಂಡ್ಯ: ಕೆಆರ್ಎಸ್ ಜಲಾಶಯ ದಶಕಗಳ ಬಳಿಕ ಅವಧಿಗೂ ಮುನ್ನ ಭರ್ತಿಯಾಗಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಿದ್ದಾರೆ.
ಕಾವೇರಿ ನದಿಗೆ ಬಾಗಿನ ಅರ್ಪಿಸಿದ ನಂತರ ಕುಮಾರಸ್ವಾಮಿ ಮಂಡ್ಯ ನಗರದಲ್ಲಿ ನಡೆಯುವ ಕೃತಜ್ಞತಾ ಸಮಾವೇಶಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಕೆಆರ್ಎಸ್ ಜಲಾಶಯ ಹಾಗೂ ಸರ್ ಎಂ.ವಿ ಕ್ರೀಡಾಂಗಣದಲ್ಲಿ ಸಿದ್ಧತೆಗಳು ಕೂಡ ಭರದಿಂದ ಸಾಗಿದೆ. ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನಗಳಲ್ಲಿ ಜೆಡಿಎಸ್ ಗೆಲ್ಲಿಸಿಕೊಟ್ಟ ಜನರಿಗೆ ಅಭಿನಂದನೆ ಸಲ್ಲಿಸಲಿದ್ದಾರೆ.
2007ರಲ್ಲಿ ಮುಖ್ಯಮಂತ್ರಿಯಾಗಿದ್ದಾಗಲು ಕೆಆರ್ಎಸ್ ಜಲಾಶಯಕ್ಕೆ ಜುಲೈ 20 ರಂದೇ ಬಾಗಿನ ಅರ್ಪಿಸಿದ್ದರು. ಈ ಬಾರಿಯು ಕೂಡ ಸಿಎಂ ಅದೇ ದಿನಾಂಕದಲ್ಲಿ ಬಾಗಿನ ಅರ್ಪಿಸುತ್ತಿರುವುದು ವಿಶೇಷವಾಗಿದೆ. ಸಿಎಂ ಆಗಮನಕ್ಕೆ ಕೆಆರ್ಎಸ್ ಜಲಾಶಯ ಸಿದ್ಧಗೊಳ್ಳುತ್ತಿದ್ದು, ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ಕೆಆರ್ಎಸ್ ಜಲಾಶಯದ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಈ ಸಮಾವೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಬೃಹತ್ ವೇದಿಕೆ ಸಿದ್ದವಾಗ್ತಿದೆ. ಸಿಎಂ ಆಗಮನಕ್ಕೆ ಪೊಲೀಸ್ ಇಲಾಖೆಯು ಸಜ್ಜಾಗಿದ್ದು, ಶುಕ್ರವಾರದ ಕಾರ್ಯಕ್ರಮ ಬಿಗಿ ಬಂದೋಬಸ್ತ್ ನೀಡ್ತಿದೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಶಾಸಕರು, ಸಚಿವರು, ಎಂಎಲ್ಸಿಗಳು ಪಾಲ್ಗೊಳ್ಳಲಿದ್ದಾರೆ.