– ನಮಗೆ ಬಹುಮತವಿದೆ
ಬೆಂಗಳೂರು: ದೇಶದಲ್ಲಿ ಏನು ನಡೆಯುತ್ತಿದೆ ಎಲ್ಲವನ್ನೂ ಗಮನಿಸುತ್ತಿದ್ದೇನೆ. ಮುಂಬೈ ಸರ್ಕಾರ ಡಿಕೆಶಿಯನ್ನು ತಡೆದಿದ್ದು ಯಾಕೆ ಎಂದು ಸಿಎಂ ಪ್ರಶ್ನಿಸಿದ್ದಾರೆ.
ಇಂದು ಬೆಳಗ್ಗೆ ಮುಂಬೈಗೆ ತೆರಳಿರುವ ಸಚಿವ ಡಿಕೆ ಶಿವಕುಮಾರ್ ಅವರನ್ನು ಹೋಟೆಲ್ ಒಳಗಡೆ ಬಿಡದೆ ಅಲ್ಲಿನ ಪೊಲೀಸರು ತಡೆದ ವಿಚಾರಕ್ಕೆ ಸಿಎಂ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದೆ. ಹೀಗಾಗಿ ಇದರ ತೀರ್ಮಾನವನ್ನು ಜನರಿಗೆ ಬಿಟ್ಟು ಬಿಡುತ್ತೇನೆ. ನಮ್ಮ ಸರ್ಕಾರಕ್ಕೆ ಬಹುಮತ ಇದೆ. ಬಿಜೆಪಿ ಶಾಸಕರಿಗೆ ಹೋಟೆಲ್ಗೆ ಹೋಗಲು ಬಿಡುತ್ತಾರೆ. ಆದರೆ ಸಚಿವ ಡಿಕೆ ಶಿವಕುಮಾರ್ಗೆ ಬಿಡುತ್ತಿಲ್ಲ ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಶನಿವಾರ 13 ಶಾಸಕರು ರಾಜೀನಾಮೆ ನೀಡಿದ್ದಾರೆ. ಅದರಲ್ಲಿ ಮೂವರನ್ನು ಹೊರತುಪಡಿಸಿ ಉಳಿದ 10 ಮಂದಿ ಶಾಸಕರು ಮುಂಬೈಗೆ ತೆರಳಿದ್ದಾರೆ. ಸದ್ಯ ಮುಂಬೈನಲ್ಲಿ ಬೀಡು ಬಿಟ್ಟ ಶಾಸಕರು, ನಮ್ಮ ರಾಜೀನಾಮೆ ಅಂಗೀಕಾರವಾಗುವವರೆಗೂ ಯಾವುದೇ ಕಾರಣಕ್ಕೂ ಬೆಂಗಳೂರಿಗೆ ಬರಲ್ಲ ಎಂದು ಹೇಳಿದ್ದರು.
ಈ ಮಧ್ಯೆ ಮಂಗಳವಾರ ಇಬ್ಬರು ಬಿಜೆಪಿ ಮುಖಂಡರು ಅತೃಪ್ತರನ್ನು ಭೇಟಿ ಮಾಡಿದ್ದಾರೆ. ಈ ಬೆನ್ನಲ್ಲೇ ಅತೃಪ್ತರ ಜೊತೆ ಮಾತುಕತೆ ನಡೆಸಲು ಇಂದು ಡಿಕೆಶಿ ತಂಡ ಭೇಟಿ ಕೊಟ್ಟಿದೆ. ಆದರೆ ಅಲ್ಲಿನ ಪೊಲೀಸರು ಇಂದು ಡಿಕೆಶಿ ಅವರನ್ನು ಹೋಟೆಲ್ ಒಳಗಡೆ ಬಿಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸದ್ಯ ಡಿಕೆಶಿ, ಜಿಟಿಡಿ ಹಾಗೂ ಶಾಸಕ ಶಿವಲಿಂಗೇ ಗೌಡ ಹೋಟೆಲ್ ಎದುರು ಮಳೆಯಲ್ಲೇ ಠಿಕಾಣಿ ಹೂಡಿದ್ದಾರೆ. ಸದ್ಯ ಅವರಿಗೆ ಅದೇ ಹೋಟೆಲಿನಲ್ಲಿ ಬೇರೆ ಕಡೆ ರೂಂ ಕೊಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.