ಬೆಂಗಳೂರು: ಜಾಬ್ಕೋಡ್ ಅವ್ಯವಹಾರದ ಹಿನ್ನೆಲೆಯಲ್ಲಿ 115 ಕೋಟಿ ರೂ ವೆಚ್ಚದಲ್ಲಿ ಬಿಬಿಎಂಪಿಯ ನೂತನ ಕಾಮಗಾರಿ ಯೋಜನೆಯನ್ನು ಸಿಎಂ ಕುಮಾರಸ್ವಾಮಿ ರದ್ದುಗೊಳಿಸಿದ್ದಾರೆ.
ಬಿಬಿಎಂಪಿಯಲ್ಲಿ ನಡೆಯುತ್ತಿರುವ ಜಾಬ್ಕೋಡ್ ಅವ್ಯವಹಾರಗಳ ಕುರಿತು ಜೆಡಿಎಸ್ ನವರು ಸಿಎಂ ಕುಮಾರಸ್ವಾಮಿಯವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಕಸ ನಿರ್ವಹಣೆಗೆ ಮೀಸಲಿಟ್ಟಿದ್ದ 115 ಕೋಟಿ ರೂಪಾಯಿಯನ್ನು ಬೇರೆ ಕಾಮಗಾರಿಗಳಿಗೆ ಬಳಸಲು ಜಾಬ್ಕೋಡ್ ನೀಡಿದ್ದ ಬಿಬಿಎಂಪಿಗೆ ಸಿಎಂ ಕುಮಾರಸ್ವಾಮಿ ಶಾಕ್ ನೀಡಿದ್ದಾರೆ. ಅಲ್ಲದೇ ಘನತ್ಯಾಜ್ಯ ನಿರ್ವಹಣೆಯ ಹಣವನ್ನು ಬೇರೆ ಕಾಮಗಾರಿಗಳಿಗೆ ಬಳಸುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದ್ದಾರೆ.
ಈಗಾಗಲೇ 115 ಕೋಟಿ ಕಾಮಗಾರಿಗೆ ಮೇಯರ್ ಸಂಪತ್ ರಾಜ್ ಕಮಿಷನ್ ಪಡೆದಿರುವ ಬಗ್ಗೆ ಸಿಎಂಗೆ ಮಾಹಿತಿ ತಿಳಿದ ಬೆನ್ನಲ್ಲೇ ಈ ಕ್ರಮಕೈಗೊಂಡು, ಜಾಬ್ಕೋಡ್ ನೀಡಿದ್ದ ಬಿಬಿಎಂಪಿಗೆ ಚಾಟಿ ಬೀಸಿದ್ದಾರೆ.
ಕಸ ನಿರ್ವಹಣೆಗೆ ಮೀಸಲಿಟ್ಟಿದ್ದ 115 ಕೋಟಿ ರೂಪಾಯಿಯನ್ನು ಬಿಬಿಎಂಪಿ ಬೇರೆ ಕಾಮಗಾರಿಗಳಿಗೆ ಬಳಸಲು ಮುಂದಾಗಿತ್ತು. ಅಲ್ಲದೆ ಪಾರ್ಕ್, ಮುಖ್ಯರಸ್ತೆಗಳ ನಿರ್ವಹಣೆಗೆ ಜಾಬ್ ಕೋಡ್ ಸಹ ನೀಡಿತ್ತು. ಈ ಸಂಬಂಧ ಮೇಯರ್ ಹಾಗೂ ಕಮಿಷನರ್ ಒಪ್ಪಿಗೆ ಪಡೆದಿದ್ದ ಕಾಮಗಾರಿಗಳನ್ನು ನಗರಾಭಿವೃದ್ಧಿ ಇಲಾಖೆಯ ಒಪ್ಪಿಗೆಗೆ ಕಳುಹಿಸಲಾಗಿತ್ತು.
ಆದರೆ ಬಿಬಿಎಂಪಿ ನೀಡಿದ್ದ 115 ಕೋಟಿ ಕಾರ್ಯಾದೇಶವನ್ನು ಸಿಎಂ ರದ್ದುಗೊಳಿಸಿದ್ದರ ಪರಿಣಾಮ ನಗರಾಭಿವೃದ್ಧಿ ಇಲಾಖೆ ಬಿಬಿಎಂಪಿಗೆ ನೂತನ ಕಾಮಗಾರಿ ಯೋಜನೆಗಳ ಜಾಬ್ಕೋಡ್ ರದ್ದುಗೊಳಿಸಿರುವುದಾಗಿ ಆದೇಶ ನೀಡಿದೆ. ಇದರಿಂದಾಗಿ ಸಿಎಂ ಕುಮಾರಸ್ವಾಮಿಯವರು ಬಿಬಿಎಂಪಿ ಅನುದಾನದ ಮೇಲೂ ಕಣ್ಣಿಟ್ಟಿದ್ದಾರಾ ಎಂಬ ಪ್ರಶ್ನೆಯೊಂದು ಮೂಡಿದೆ.
https://www.youtube.com/watch?v=DEDVgEp1jlw