ಚಿಕ್ಕಮಗಳೂರು: ದೇಶದಲ್ಲಿ ಮಂಡ್ಯ ಬಿಟ್ಟು ಬೇರೆ ಕಡೆ ಚುನಾವಣೆ ನಡೆಯುತ್ತಿಲ್ವಾ ಎಂದು ಪ್ರಶ್ನೆಸಿ ಇದಕ್ಕೆಲ್ಲಾ ನಾನು ಮೇ 23ರ ನಂತರ ನಿಮಗೆ ಉತ್ತರಿಸುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಕುಮಾರಸ್ವಾಮಿ ಅವರು, ಮಂಡ್ಯದಲ್ಲಿ ಕೈ ಮೀರಿ ಹೋಗಿರುವ ಘಟನೆಗಳು ನಡೆದಿವೆ. ಇವತ್ತು ಬಿಜೆಪಿ ಪಕ್ಷೇತರ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸುತ್ತಿದೆ. ಮಂಡ್ಯದಲ್ಲಿ ಹೆಸರಿಗೆ ಮಾತ್ರ ಪಕ್ಷೇತರ ಅಭ್ಯರ್ಥಿಯಷ್ಟೇ. ಅವರಿಗೆ ಕಾಂಗ್ರೆಸ್, ಬಿಜೆಪಿ ಮತ್ತು ರೈತ ಸಂಘದ ಬೆಂಬಲವಿದೆ. ಇಷ್ಟೆಲ್ಲ ಸೇರಿ ಜೆಡಿಎಸ್ ಮಣಿಸುವುದಕ್ಕೆ ಹೊರಟಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯಿಸಿದರು.
ಮಂಡ್ಯದಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಮೂರು ತಿಂಗಳಿನಿಂದ ಮಾಧ್ಯಮದಲ್ಲಿ ಬರುವುದು ಬೇರೆ. ಸ್ಥಳೀಯವಾಗಿ ಅಲ್ಲಿ ಇರುವ ಪರಿಸ್ಥಿತಿಯೇ ಬೇರೆಯಾಗಿದೆ. ಮೇ 23ರ ಬಳಿಕ ನಿಮಗೆ ಉತ್ತರಿಸುತ್ತೇನೆ. ದೇಶದಲ್ಲಿ ಮಂಡ್ಯ ಬಿಟ್ಟು ಬೇರೆ ಕಡೆ ಎಲೆಕ್ಷನ್ ನಡೆಯುತ್ತಿಲ್ವಾ ಎಂದು ಸಿಎಂ ಪ್ರಶ್ನೆ ಮಾಡಿದರು. ಜೆಡಿಎಸ್ ಮಣಿಸೋದಕ್ಕೆ ಎಲ್ಲಾ ರೀತಿಯ ಚಕ್ರವ್ಯೂಹ ರಚನೆ ಮಾಡಿದ್ದಾರೆ. ಮಂಡ್ಯ ಜನರು ಎಲ್ಲವನ್ನೂ ಮೆಟ್ಟಿ ನಿಲ್ಲುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.
ಐಟಿ ದಾಳಿಯ ಮೂಲಕ ಅಭ್ಯರ್ಥಿಗಳನ್ನು ಯಾವುದೇ ಕಾರಣಕ್ಕೂ ಕುಗ್ಗಿಸಲು ಸಾಧ್ಯವಿಲ್ಲ. ಐಟಿ ದಾಳಿಯ ಉದ್ದೇಶ ಎಲ್ಲರಿಗೂ ಗೊತ್ತಿದೆ. ಬಿಜೆಪಿಯವರ ಮಾರ್ಗದರ್ಶನದಲ್ಲಿ ರೇಡ್ ನಡೆಯುತ್ತಿದೆ. ಅದಕ್ಕೆಲ್ಲಾ ಸೊಪ್ಪು ಹಾಕದೇ ಹೋರಾಟಕ್ಕೆ ಈಗಾಗಲೇ ತಯಾರು ಮಾಡಿಕೊಂಡು ಹೊರಟಿದ್ದೇವೆ ಎಂದರು.