ರಾಮನಗರ: ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದಾಗಿ ತೋರಿಸುವ ಹಿನ್ನೆಲೆಯಲ್ಲಿ ನಾನೇ ಮಾಧ್ಯಮಗಳನ್ನು ದೂರವಿಡಲು ಸೂಚಿಸಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.
ಆಹ್ವಾನಿಸಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಪಕ್ಷ ಎಂದರೆ ನಮ್ಮ ಮನೆ. ಹೀಗಾಗಿ ಅದು ನಮ್ಮ ಮನೆಯ ಕಾರ್ಯಕ್ರಮ ಇದಾಗಿದೆ. ಸಣ್ಣಪುಟ್ಟ ಗೊಂದಲಗಳು ಸಹಜ. ಈ ಗೊಂದಲಗಳನ್ನೇ ಮಾಧ್ಯಮಗಳು ದೊಡ್ಡವಾಗಿ ಪ್ರಚಾರ ಮಾಡುತ್ತವೆ. ಹೀಗಾಗಿ ನಾನೇ ಮಾಧ್ಯಮಗಳನ್ನು ದೂರವಿಡಲು ಸೂಚಿಸಿದ್ದೇನೆ ಎಂದು ಸ್ಟಷ್ಟನೆ ನೀಡಿದ್ದಾರೆ.
ಮನೆ ವಿಷಯಗಳನ್ನು ತೆಗೆದುಕೊಂಡು ಹೋಗಿ ಬೀದಿಯಲ್ಲಿ ಮಾತನಾಡಲು ಸಾಧ್ಯವಿಲ್ಲ. ಹೀಗಾಗಿ ಮಾಧ್ಯಮಗಳನ್ನು ದೂರವಿಟ್ಟಿದ್ದೇನೆ. ಸಂಜೆ 5 ಗಂಟೆಯ ನಂತರ ಎಲ್ಲಾ ಮಾಹಿತಿಗಳನ್ನು ನಿಮ್ಮ ಮುಂದೆ ಇಡುತ್ತೇನೆ ಎಂದು ಸಿಎಂ ಹೇಳಿದರು.
ರಾಮನಗರದ ಚುನಾವಣೆಯ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕೆ ಸಭೆ ಕರೆದಿಲ್ಲ. ಬಿಡುವಿಲ್ಲದೇ ಇರುವ ಕಾರ್ಯಕ್ರಮಗಳ ನಡುವೆ ಮನೆ ಹತ್ತಿರ ಬರುವ ಕಾರ್ಯಕರ್ತರನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಅದರ ಹಿನ್ನೆಲೆ ಬೆಳಗ್ಗೆ ಚನ್ನಪಟ್ಟಣ ಕಾರ್ಯಕರ್ತರ ಸಭೆ, ಮಾಧ್ಯಾಹ್ನ ರಾಮನಗರದ ಕಾರ್ಯಕರ್ತರ ಸಭೆ ಕರೆದಿದ್ದೇನೆ. ಕಾರ್ಯಕರ್ತರಿಗೆ ಏನಾದರೂ ಅಸಮಾಧಾನವಿದ್ದರೆ ವಿಚಾರಿಸುವ ದೃಷ್ಟಿಯಿಂದ ಬಂದಿದ್ದೇವೆ ಹೊರತು ಬೇರೆ ಏನೂ ಇಲ್ಲ ಎಂದು ಹೇಳಿದರು.
ಬಿಡದಿಯ ಕೇತಗಾನಹಳ್ಳಿ ಸಮೀಪದ ಸಿಎಂ ಕುಮಾರಸ್ವಾಮಿ ಅವರ ಫಾರ್ಮ್ ಹೌಸ್ನಲ್ಲಿ ಬುಧವಾರ ಸಭೆಯನ್ನು ಕರೆಯಲಾಗಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಮಾಧ್ಯಮಗಳಿಗೆ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರ ಜೊತೆಗಿನ ಸಿಎಂ ಸಭೆಯ ಮಾಹಿತಿಯನ್ನು ಮೊದಲೇ ತಿಳಿಸಲಾಗಿತ್ತು. ಹೀಗಾಗಿ ಬೆಳಗ್ಗೆ ಸಭೆ ಆಯೋಜನೆಗೊಂಡಿದ್ದ ಫಾರ್ಮ್ ಹೌಸ್ಗೆ ಮಾಧ್ಯಮದವರು ತೆರಳಿದಾಗ ಅಲ್ಲಿದ್ದ ಪೊಲೀಸರು ಮಾಧ್ಯಮಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ಫಾರ್ಮ್ ಹೌಸ್ ಗೇಟ್ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಗೇಟ್ ಬಳಿಯೇ ಮಾಧ್ಯಮದವರನ್ನ ತಡೆಯಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv