ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಯಾದಗಿನಿಂದ ಸಿಎಂ ಕುಮಾರಸ್ವಾಮಿ ಮಾಧ್ಯಮಗಳಿಂದ ಅಂತರವನ್ನು ಕಾಯ್ದುಕೊಂಡು ಬರುತ್ತಿದ್ದಾರೆ. ಈ ನಡುವೆ ಜನರ ಕೈಗೂ ಸಿಎಂ ಸಿಗುತ್ತಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಇದೀಗ ಸಿಎಂ ಕುಮಾರಸ್ವಾಮಿ ಬದಲಾಗಿದ್ದು, ಸೋಮವಾರದಿಂದ ಫುಲ್ ಆ್ಯಕ್ಟೀವ್ ಆಗಲಿದ್ದಾರೆ. ಈ ಹಿಂದೆ ಸಿಎಂ ಆಗಿದ್ದಾಗ ಗ್ರಾಮ ವಾಸ್ತವ್ಯ ಮಾಡುವ ಮೂಲಕ ನಪ್ರಿಯರಾಗಿದ್ದ ಕುಮಾರಸ್ವಾಮಿ ಅವರು ಇನ್ಮುಂದೆ ಹೋಬಳಿ ಮಟ್ಟದಲ್ಲಿ ಆಡಳಿತ ನಡೆಸಲಿದ್ದಾರೆ.
ತಿಂಗಳಲ್ಲಿ ನಾಲ್ಕು ದಿನ ಗ್ರಾಮಪಂಚಾಯ್ತಿ, ಹೋಬಳಿ ಮಟ್ಟದಲ್ಲಿ ಕುಮಾರಸ್ವಾಮಿ ಆಡಳಿತ ನಡೆಸಲಿದ್ದಾರೆ. ವಾರದಲ್ಲಿ ಒಂದು ದಿನ ಹೋಬಳಿ ಮಟ್ಟದಲ್ಲಿ ಸಿಎಂ ಉಳಿದು ಆಡಳಿತ ವೈಖರಿಯನ್ನು ಪರಿಶೀಲಿಸಲಿದ್ದಾರೆ. ಒಂದು ದಿನದ ಹೋಬಳಿ ಮಟ್ಟದ ಆಡಳಿತದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಜನರ ಬಳಿಯೇ ಕುಳಿತು ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಈ ಬಾರಿ ಗ್ರಾಮಗಳ ಮನೆಯಲ್ಲಿ ವಾಸ್ತವ್ಯದ ಬದಲು ಅಲ್ಲಿಯ ಶಾಲೆಗಳಲ್ಲಿ ಸಿಎಂ ವಿಶ್ರಾಂತಿ ಪಡೆಯಲಿದ್ದಾರೆ.
ಮಕ್ಕಳಿಗೆ ತೊಂದರೆಯಾಗದಂತೆ ಶಾಲೆಯಲ್ಲಿ ನಾಲ್ಕು ದಿನ ವಾಸ್ತವ್ಯ ಹೂಡಿ ಬೆಳಗ್ಗೆ ಬೆಂಗಳೂರಿನತ್ತ ಸಿಎಂ ವಾಪಾಸ್ಸು ಆಗ್ತಾರೆ. ಬೆಂಗಳೂರಿನಲ್ಲಿದ್ದಾಗ 15 ದಿನಕ್ಕೊಮ್ಮೆ ಮುಂಜಾನೆಯಿಂದ ರಾತ್ರಿ 12ರ ತನಕ ಜನತಾ ದರ್ಶನದಲ್ಲಿ ಸಿಎಂ ಭಾಗಿಯಾಗುವ ಮೂಲಕ ಮೈತ್ರಿ ಸರ್ಕಾರದ ಬಗ್ಗೆ ಹ್ಯಾಟ್ಸಾಫ್ ಹೇಳುವಂತೆ ಮಾಡ್ತೀನಿ ಅಂತಾ ಸಿಎಂ ಸವಾಲ್ ಹಾಕಿದ್ದಾರೆ.
ಕುಮಾರಸ್ವಾಮಿ ಕಾರ್ಯಪ್ರವೃತ್ತಿ ಆಗ್ತಿರೋದ್ಯಾಕೆ..?
* ಬಿಎಸ್ವೈ ಆಪರೇಷನ್ ಕಮಲ ಠುಸ್ಸಾಗಿರೋದು.
* ರೆಬೆಲ್ ರಮೇಶ್ ಜಾರಕಿಹೊಳಿ ಏಕಾಂಗಿಯಾಗಿದ್ದು, ಭಿನ್ನರೂ ಸಿಎಂ ಪರ ಬ್ಯಾಟಿಂಗ್ ಮಾಡ್ತಿರೋದು.
* ಲೋಕಸಭೆ ಸೋಲಿನ ಬಳಿಕ ಕಾಂಗ್ರೆಸ್ ನಲ್ಲೂ ಸಿಎಂ ಕಚ್ಚಾಟಕ್ಕೆ ತಾತ್ಕಾಲಿಕವಾಗಿಯಾದರೂ ಬ್ರೇಕ್ ಬಿದ್ದಿರೋದು.
* ಮುಂದಿನ 4 ವರ್ಷ ಕುಮಾರಸ್ವಾಮಿಯೇ ಸಿಎಂ ಅಂಥ ಕಾಂಗ್ರೆಸ್ ಹೈ ಕಮಾಂಡ್ ಜೊತೆಗೆ ರಾಜ್ಯ ನಾಯಕರು ಹೇಳ್ತಿರೋದು.
* ಸ್ಪೀಕರ್ ರಮೇಶ್ ಕುಮಾರ್ ಅವರು ಪತ್ರದ ಮೂಲಕ ಬಹಿರಂಗವಾಗಿ ಕಿವಿ ಹಿಂಡಿರೋದು.
* ಮುಂಗಾರು ಅಧಿವೇಶನದ ಹೊತ್ತಿಗಾದರೂ ಒಂದಷ್ಟು ಜನಪರ ಕಾರ್ಯ ಮಾಡಿ.. ಬಿಜೆಪಿ ಟೀಕೆಗೆ ಬೀಗ ಹಾಕುವುದು.
* ರಾಜ್ಯಭಾರ ಮಾಡದೇ ಒಂದು ವರ್ಷ ಬರೀ ದೇವಾಲಯ ಸುತ್ತಿದರು ಅನ್ನೋ ಆರೋಪದಿಂದ ಮುಕ್ತರಾಗಲು.
ಜನರೊಂದಿಗೆ ಬೆರೆಯಲು, ಅವರ ಸಮಸ್ಯೆಗಳನ್ನು ಅರಿಯಲು, ಸರ್ಕಾರದ ಕಾರ್ಯವೈಖರಿ ತಿಳಿಯಲು ನೆರವಾಗುವುದು ಗ್ರಾಮ ವಾಸ್ತವ್ಯ.
ಶೀಘ್ರವೇ ನನ್ನ ಗ್ರಾಮ ವಾಸ್ತವ್ಯ ಪ್ರಾರಂಭವಾಗಲಿದೆ, ಸರ್ಕಾರಿ ಶಾಲೆಗಳಲ್ಲಿ.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) June 2, 2019