ಹಾಸನ: ವೇದಿಕೆ ಮೇಲೆ ಭಾಷಣದ ಮೇಲೆ ಭಾಷಣ ಮಾಡಿದರೇ ಸಾಲದು, ಉಗ್ರರಿಗೆ ಪಾಠ ಕಲಿಸಲು ದಡಂ ದಶಗುಣಂ ಮಾಡಬೇಕು. ಕೇವಲ ಘೋಷಣೆ ಕೂಗುವುದರಿಂದ ಸಮಸ್ಯೆ ಬಗೆಹರಿಯಲ್ಲ ಎಂದು ಸಿಎಂ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾಷಣ- ಘೋಷಣೆ ಕೂಗಿದರೆ ಸಾಲದು, ಜೊತೆಗೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವ ಬಗ್ಗೆ ಚಿಂತನೆ ಮಾಡಬೇಕು. ದೇವೇಗೌಡರು ಪ್ರಧಾನಿಯಾಗಿದ್ದಾಗ ಪರಿಸ್ಥಿತಿ ಶಾಂತವಾಗಿತ್ತು. ಆದ್ರೆ ಈಗ ಯಾಕೆ ದೇಶದಲ್ಲಿ ಈ ರೀತಿ ರಕ್ತದೋಕುಳಿ ಹರಿಯುತ್ತಿದೆ? ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಅಂತ ಘೋಷಣೆ ಮಾಡಿದರೆ ಸಮಸ್ಯೆ ಪರಿಹಾರ ಆಗಲ್ಲ ಎಂದು ಪರೋಕ್ಷವಾಗಿ ಮೋದಿ ಮತ್ತು ಕೇಂದ್ರ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದರು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ, ಯಾರು ಯಾರಿಗೆ ಕಲ್ಲು ಹೊಡೆಯುತ್ತಾರೋ ಗೊತ್ತಿಲ್ಲ. ಆದ್ರೆ ರಾಜ್ಯದ ಜನ ಯಾರಿಗೆ ಕಲ್ಲು ಹೊಡೆಯುತ್ತಾರೋ ನೋಡೋಣ. ಸರ್ಕಾರವನ್ನು ಸದ್ಯಕ್ಕೆ ಅಸ್ಥಿರಗೊಳಿಸಲಿಕ್ಕೆ ಆಗಲ್ಲ, ಯಾಕೆಂದರೆ ಕೆಲವರು ಕೋರ್ಟ್ನಿಂದ ಸ್ಟೇ ತರುತ್ತಾರೆ. ಆದರೆ ನಾವು ಬೇರೆ ರೀತಿಯಲ್ಲೇ ಸ್ಟೇ ತಂದಿದ್ದೇವೆ. ರಾಜ್ಯದ ಅಭಿವೃದ್ಧಿ ಹೊಣೆ ನಮ್ಮ ಮೇಲಿದೆ. ಇಂದು ಬೆಳಗ್ಗೆ ಸಹ ಕೆಲವು ಅಭಿವೃದ್ಧಿ ಕಾರ್ಯಗಳಿಗೆ ನಾನು ಚಾಲನೆ ನೀಡಿ ಬಂದಿದ್ದಾನೆ ಎಂದರು.
ಚಿತ್ರದುರ್ಗದಲ್ಲಿ ಎಲ್ಇಡಿ ಬಲ್ಪ್ ತಯಾರಿಸುವ ಕಂಪನಿ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಯುವಕರಿಗೆ ಉದ್ಯೋಗ ಕೊಡುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಎಸ್ಐಟಿ ತನಿಖೆ ಕುರಿತು ಮಾತನಾಡಿ, ನನಗೇನು ಅದರ ಬಗ್ಗೆ ಆತುರವಿಲ್ಲ. ನನ್ನ ಕರ್ತವ್ಯವನ್ನು ನಾನು ಮಾಡುತ್ತೇನೆ. ಬೇರೆಯವರ ಮೇಲೆ ಸೇಡು ತೀರಿಸಿಕೊಳ್ಳೋದು ನನ್ನ ಜಾಯಮಾನ ಅಲ್ಲ. ಚುನವಾಣೆಯ ಬಗ್ಗೆ ನಮ್ಮ ಹಿರಿಯರು, ಹಾಗೂ ಕಾಂಗ್ರೆಸ್ನವರು ತಿರ್ಮಾನಿಸುತ್ತಾರೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv