ಭೋಪಾಲ್: ತನ್ನ ಹಾಗೂ ಕುಟುಂಬದ ಹಸಿವನ್ನು ನೀಗಿಸಿಕೊಳ್ಳಲು 12 ವರ್ಷದ ಬಾಲಕಿಯೊಬ್ಬಳು ದೇವಸ್ಥಾನದ ಹುಂಡಿಯಲ್ಲಿದ್ದ 250 ರೂಪಾಯಿ ಕದ್ದು ಸಿಕ್ಕಬಿದ್ದಿದ್ದಳು. ಈ ವಿಷಯವನ್ನು ತಿಳಿದ ಮಧ್ಯಪ್ರದೇಶ ಸರ್ಕಾರ ಬಾಲಕಿ ಕುಟುಂಬಕ್ಕೆ ನೆರವಾಗಿದೆ.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ರೆಹ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕುಟುಂಬದ ಹಸಿವನ್ನು ನೀಗಿಸಲು ಬಾಲಕಿ ವಿಧಿಯಿಲ್ಲದೆ ದೇವಸ್ಥಾನದ ಹುಂಡಿ ಹಣ ಕದ್ದಿದ್ದಳು. ಸೆ. 21ರಂದು ರೆಹ್ಲಿ ಗ್ರಾಮದ ದೇವಸ್ಥಾನದ ಹುಂಡಿಯಿಂದ 250 ರೂ. ಹಣವನ್ನು ಕದ್ದಿದ್ದಳು. ಈ ದೃಶ್ಯವು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದ್ದರಿಂದ ಸೆ.22ರಂದು ದೇವಸ್ಥಾನದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿತ್ತು. ಈ ದೂರಿನ ಆಧಾರದ ಮೇಲೆ ಬಾಲಕಿಯನ್ನು ಬಂಧಿಸಿದ ಪೊಲೀಸರು ಆಕೆಯನ್ನು ಶಹಡೋಲ್ ಜಿಲ್ಲೆಯ ಬಾಲಮಂದಿರಕ್ಕೆ ಕಳುಹಿಸಿದ್ದರು.
ವಿಚಾರಣೆ ವೇಳೆ ಬಾಲಕಿ ಹಣ ಯಾಕೆ ಕಳ್ಳತನ ಮಾಡಿದ್ದು ಎನ್ನುವುದನ್ನು ತಿಳಿಸಿದಳು. ನನ್ನ ಕುಟುಂಬದ ಹಸಿವು ನೀಗಿಸಲು ಹಣ ಕಳ್ಳತನ ಮಾಡಿದೆ. ಸೆ.21ರಂದು 10 ಕೆಜಿ ಗೋಧಿಯನ್ನು ಹಿಟ್ಟು ಮಾಡಿಸಿಕೊಳ್ಳಲು ಹೋಗಿದ್ದೆ. ಆದರೆ ದಾರಿಯಲ್ಲಿ ಎಲ್ಲೋ ಗೋಧಿಯನ್ನು ಮರೆತು ಬಿಟ್ಟುಬಂದೆ. ಅದನ್ನು ಬಿಟ್ಟರೆ ನಮಗೆ ಊಟಕ್ಕೆ ಬೇರೆ ಏನು ಇರಲಿಲ್ಲ. ಆದ್ದರಿಂದ ದೇವಸ್ಥಾನದಿಂದ 250 ರೂ. ಕದ್ದು ಅದರಿಂದ ಗೋಧಿ ಖರೀಧಿಸಿದೆ. ಉಳಿದ ಹಣವನ್ನು ಹಾಗೆ ಇಟ್ಟಿದ್ದೇನೆ ಎಂದು ತಿಳಿಸಿದಳು.
ಈ ಬಗ್ಗೆ ಜಿಲ್ಲಾಧಿಕಾರಿಗೆ ತಿಳಿದು ಬಾಲಕಿಗೆ ಬೇಲ್ ಕೊಡಿಸಿ ಬಿಡಿಸಿದರು. ಜೊತೆಗೆ ಆಕೆಯ ತಂದೆಗೆ 10 ಸಾವಿರ ಹಣವನ್ನು ನೀಡಿ ಸಹಾಯ ಮಾಡಿದ್ದರು. ಬಾಲಕಿಯ ಪರಿಸ್ಥಿತಿ ಬಗ್ಗೆ ಅರಿತ ಮಧ್ಯಪ್ರದೇಶ ಸಿಎಂ ಕಮಲ್ನಾಥ್ ಅವರು ಬಾಲಕಿ ಕುಟುಂಬದ ನೆರವಿಗೆ ಬಂದಿದ್ದು, ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ಹಣವನ್ನು ಘೋಷಿಸಿದ್ದಾರೆ. ಜೊತೆಗೆ ಸರ್ಕಾರದಿಂದ ಬಾಲಕಿ ಕುಟುಂಬಕ್ಕೆ ಅವಶ್ಯಕವಿರುವ ವಸ್ತುಗಳನ್ನು ನೀಡಿವುದರ ಜೊತೆಗೆ ಸ್ವಲ್ಪ ಭೂಮಿಯನ್ನು ಕೂಡ ನೀಡಲಾಗಿದೆ. ಹಾಗೆಯೇ ಬಾಲಕಿಯ ಶಿಕ್ಷಣದ ಖರ್ಚನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದರು.
कई बार जीवन यापन के लिये ,अभाव में मासूम ग़लत राह पकड़ लेते है।
सागर ज़िले के रहली गाँव के मज़दूर परिवार को एक लाख की आर्थिक सहायता प्रदान करने के साथ ही परिवार को सरकारी योजनाओं का लाभ प्रदान करने के , बच्चों की पढ़ाई की व्यवस्था करने के व परिवार को राशन उपलब्ध कराने के निर्देश।
— Kamal Nath (@OfficeOfKNath) October 1, 2019
ಈ ಬಗ್ಗೆ ಕಮಲ್ನಾಥ್ ಅವರು ಟ್ವೀಟ್ ಮಾಡಿ, ಸಾಕಷ್ಟು ಬಾರೀ ಅನಿವಾರ್ಯ ಕಾರಣಗಳಿಂದ ಮುಗ್ಧರು ಚಿಕ್ಕವಯಸ್ಸಿನಲ್ಲಿ ಸಂಪಾದನೆ ಮಾಡಲು ತಪ್ಪು ದಾರಿ ಹಿಡುದುಬಿಡುತ್ತಾರೆ. ಸಾಗರ್ ಜಿಲ್ಲೆಯ ರೆಹ್ಲಿ ಗ್ರಾಮದ ಬಾಲಕಿ ಕುಟುಂಬಕ್ಕೆ 1 ಲಕ್ಷ ರೂ. ಹಣವನ್ನು ನೀಡಲು ಸೂಚಿಸಿದ್ದೇನೆ. ಇದನ್ನು ಹೊರತುಪಡಿಸಿ, ಕುಟುಂಬವು ಸರ್ಕಾರಿ ಕಲ್ಯಾಣ ಯೋಜನೆಗಳ ಲಾಭವನ್ನೂ ಕೂಡ ಪಡೆಯಲಿದೆ. ರೇಷನ್ ಹಾಗೂ ಮಕ್ಕಳ ವಿದ್ಯಾಭ್ಯಾಸದ ಖರ್ಚನ್ನು ಸರ್ಕಾರ ಭರಿಸಲಿದೆ ಎಂದು ತೀಳಿಸಿದರು.