ಅಮರಾವತಿ: ಆಂಧ್ರ ಪ್ರದೇಶದ ಯಾವುದೇ ಹಗರಣವನ್ನು ಸಿಬಿಐ ತನಿಖೆ ಮಾಡುವಂತ್ತಿಲ್ಲ ಎಂದು ಮಾಜಿ ಸಿಎಂ ಚಂದ್ರಬಾಬು ನಾಯ್ಡು ವಿವಾದಿತ ಆದೇಶವನ್ನು ಸಿಎಂ ಜಗನ್ ಮೋಹನ್ ರೆಡ್ಡಿ ರದ್ದು ಮಾಡಿದ್ದಾರೆ.
ಆಂಧ್ರ ಪ್ರದೇಶ ಸಿಎಂ ಆಗಿ ಮೇ 30 ರಂದು ಅಧಿಕಾರ ವಹಿಸಿಕೊಂಡ ಜಗನ್ ಮೋಹನ್ ರೆಡ್ಡಿ ಸರ್ಕಾರದ ಪರ ಹಲವು ಜನಪರ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ಇದರ ಬೆನ್ನಲ್ಲೆ ಸಿಬಿಐಗೆ ರಾಜ್ಯದಲ್ಲಿ ತನಿಖೆ ನಡೆಸುವ ಹಾದಿಯನ್ನ ಸುಗಮಗೊಳಿಸಿದ್ದಾರೆ. ಸಿಎಂ ಕಾರ್ಯದರ್ಶಿ ಈ ಆದೇಶವನ್ನು ಪ್ರಕಟಿಸಿದ್ದಾರೆ.
ಕಳೆದ ವರ್ಷ ಚಂದ್ರಬಾಬು ನಾಯ್ಡು ಅವರು ಕೇಂದ್ರ ಸರ್ಕಾರವೂ ರಾಜ್ಯಗಳಲ್ಲಿ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಒಪ್ಪಿಗೆಯ ಅನುಮತಿಯನ್ನು ಹಿಂತೆಗೆದುಕೊಂಡು ಆದೇಶ ನೀಡಿದ್ದರು. ಆ ಮೂಲಕ ಕೇಂದ್ರ ಸರ್ಕಾರ ರಾಜ್ಯದಲ್ಲಿ ನಡೆಸುತ್ತಿದ್ದ ತನಿಖೆಗಳಿಗೆ ಬ್ರೇಕ್ ಹಾಕಿದ್ದರು. ಇದನ್ನು ಓದಿ: ಆಂಧ್ರ ರೈತರ ಖಾತೆಗೆ ಬೀಳಲಿದೆ ವಾರ್ಷಿಕ 12,500 ರೂ.
ದೆಹಲಿ ವಿಶೇಷ ಪೊಲೀಸ್ ಸಂಸ್ಥೆಯ ಕಾಯಿದೆ (1946) ಅಡಿಯಲ್ಲಿ ಬರುವ ಸೆಕ್ಷನ್ 6ರ ಅನುಸಾರ ರೂಪಿಸಲಾಗಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಸಿಬಿಐ ಗೆ ನೀಡಿದ್ದ ಅಧಿಕಾರವನ್ನು ಅಂದು ಹಿಂಪಡೆಯಲಾಗಿದ್ದು, ಆಂಧ್ರ ಪ್ರದೇಶದಲ್ಲಿ ಸಿಬಿಐ ಅಧಿಕಾರಿಗಳು ಯಾವುದೇ ರೀತಿಯ ತನಿಖೆ, ದಾಳಿ ನಡೆಸಿದರೂ ಅದಕ್ಕೆ ರಾಜ್ಯ ಸರ್ಕಾರದ ಅನುಮತಿ ಪಡೆಯವುದು ಕಡ್ಡಾಯವಾಗಿತ್ತು. ಸದ್ಯ ಸಿಎಂ ಜಗನ್ ಆದೇಶವನ್ನು ರದ್ದು ಪಡಿಸಿರುವುದರಿಂದ ಸಿಬಿಐ ಆಂಧ್ರಪ್ರದೇಶದಲ್ಲಿ ತನಿಖೆ ನಡೆಸಬಹುದಾಗಿದೆ.