ಹುಬ್ಬಳ್ಳಿ: ಬಿಜೆಪಿ ಅವರು ಕಾಂಗ್ರೆಸ್ ಮಕ್ಕಳನ್ನು ಕರೆದೊಯ್ದು ಸಾಕುತ್ತಿದ್ದಾರೆ. ಬೇರೆಯವರ ತಾಳಿ ಕಿತ್ತುಕೊಂಡು ತಾವು ಕಟ್ಟಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿಯಿಂದ ಕಲಬುರಗಿಯಲ್ಲಿ ಸ್ಪರ್ಧಿಸಲು ಅಭ್ಯರ್ಥಿ ಇಲ್ಲ ಎಂದು ಶ್ರೀನಿವಾಸ್ ಪ್ರಸಾದ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಅಲ್ಲಿ ಕಣಕ್ಕಿಳಿಸಿದ್ದಾರೆ. ಬಿಜೆಪಿಯವರು ಕಾಂಗ್ರೆಸ್ಸಿಗರ ಮಕ್ಕಳನ್ನು ತಾವು ಸಾಕುತ್ತಿದ್ದಾರೆ. ಈ ಮೂಲಕ ಬೆರೆಯವರ ತಾಳಿ ಕಿತ್ತುಕೊಂಡು ತಾವು ಕಟ್ಟಿಕೊಂಡಿದ್ದಾರೆ. ಪಕ್ಕದ ಮನೆಯವರ ಸೊಸೆಯನ್ನು ತಮ್ಮ ಮನೆಗೆ ಸೇರಿಸಿಕೊಂಡಿರುವ ಹಾಗೆ ಬಿಜೆಪಿ ಸ್ಥಿತಿ ಇದೆ. ಆದ್ರೆ ನಮ್ಮಲ್ಲಿ ಹಾಗಿಲ್ಲ, ನಮ್ಮ ಅಭ್ಯರ್ಥಿಯನ್ನೇ ನಾವು ಚುನಾವಣೆಯಲ್ಲಿ ನಿಲ್ಲಿಸಿದ್ದೇವೆ ಎಂದು ಟಾಂಗ್ ಕೊಟ್ಟಿದ್ದಾರೆ.
ಬಳಿಕ ದೇಶ ಅಪಾಯದಲ್ಲಿದೆ, ಸಂವಿಧಾನ ಉಳಿಸಬೇಕಿದೆ. ಮೋದಿ ವರ್ತನೆ ಅಹಂ ಬ್ರಹ್ಮಾಸ್ಮಿ ಎಂಬಂತಿದೆ. ದೇಶಕ್ಕೆ ವಾಜಪೇಯಿ ಕೊಡುಗೆಯನ್ನು ಮೋದಿ ಸ್ಮರಿಸುತ್ತಿಲ್ಲ. ವಾಜಪೇಯಿ ದೇಶಕ್ಕೆ ಹೆದ್ದಾರಿಗಳನ್ನು ಕೊಟ್ಟಿರುವ ಮಹಾನುಭಾವ. ಅದಕ್ಕೆ ನಾವು ವಾಜಪೇಯಿ ಅವರನ್ನು ಪಕ್ಷಾತೀತವಾಗಿ ಸ್ಮರಿಸುತ್ತೇವೆ. ಆದ್ರೆ ಮೋದಿ ಈ ದೇಶಕ್ಕೆ ಏನ್ ಮಾಡಿದ್ದಾರೆ? ಚೌಕಿದಾರ್ ಗೆ ತನ್ನ ಕಚೇರಿಯಲ್ಲಿರುವ ಕಡತ ಕಾಪಾಡಲು ಸಾಧ್ಯವಾಗಿಲ್ಲ. ಇನ್ನು ದೇಶವನ್ನು ಹೇಗೆ ಕಾಪಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದೇಶಕ್ಕಾಗಿ ರಾಹುಲ್ ಗಾಂಧಿ ಸತ್ತಿದ್ದಾರೆ- ಹೊಗಳುವ ಭರದಲ್ಲಿ ಸಿಎಂ ಇಬ್ರಾಹಿಂ ಎಡವಟ್ಟು
ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಅನಾಹುತಗಳ ಸಂಖ್ಯೆ ಹೆಚ್ಚಾಗಿದೆ. ಅಂದಾನಿ, ಅಂಬಾನಿ ಬಿಟ್ಟರೆ ಮೋದಿಗೆ ಬೇರೆ ಯಾರೂ ಕಾಣುದಿಲ್ಲ. ಹಲವು ಯೋಜನೆಗಳನ್ನು ಈ ಉದ್ಯಮಿಗಳಿಗೆ ಕೊಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಬಹಳ ಕೆಲಸವನ್ನು ಮಾಡಿದ್ದೇವೆ. ಆದ್ರೆ ಅದನ್ನು ನಾವು ಹೇಳಿಕೊಳ್ಳಲ್ಲ ಎಂದು ಮೋದಿ ವಿರುದ್ಧ ಕಿಡಿಕಾರಿದರು.
ಯಡಿಯೂರಪ್ಪ ಹವಾ ಬಿಜೆಪಿಯಲ್ಲಿ ಕಡಿಮೆಯಾಗಿದೆ. ಯಡಿಯೂರಪ್ಪ ಮಾತು ರಾಜ್ಯದಲ್ಲಿ ಹಾಗೂ ಪಕ್ಷದಲ್ಲಿ ನಡೆಯುತ್ತಿಲ್ಲ. ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಮುಂದೆ ಯಡಿಯೂರಪ್ಪ ಹಿಂದೆ ಎಂಬಂತಾಗಿದೆ. ಯಡಿಯೂರಪ್ಪನಿಗೆ ಸ್ವಾಭಿಮಾನ ಇದ್ರೆ ಬಿಜೆಪಿ ತೊರೆಯಬೇಕಿತ್ತು ಎಂದು ಟೀಕಿಸಿದರು.