ಬೆಂಗಳೂರು: ದಿಢೀರ್ ಬೆಳವಣಿಗೆಯಲ್ಲಿ ಕಾಂಗ್ರೆಸ್ ಮುಖಂಡ, ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವ್ರನ್ನ ಭೇಟಿಯಾದ್ರು.
ಇಂದು ಪದ್ಮನಾಭನಗರ ನಗರ ನಿವಾಸಕ್ಕೆ ದಿಢೀರ್ ಭೇಟಿ ನೀಡಿದ ಇಬ್ರಾಹಿಂ, ಸುಮಾರು 45 ನಿಮಿಷಗಳ ಕಾಲ ಇಬ್ಬರು ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಬಳಿಕ ಸಿಎಂ ಇಬ್ರಾಹಿಂ ಅವರನ್ನು ಸ್ವತಃ ಎಚ್ ಡಿ ಕುಮಾರಸ್ವಾಮಿ ಮನೆ ಬಾಗಿಲವರೆಗೂ ಬಂದು ಬೀಳ್ಕೊಟ್ಟಿದ್ದಾರೆ.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಇಬ್ರಾಹಿಂ, ಇಂದು ಸಂಕ್ರಾಂತಿ ಹಬ್ಬ. ರಾಷ್ಟ್ರದ ಹಿರಿಯ ಮುತ್ಸದ್ಧಿ ರಾಜಕಾರಣಿ ದೇವೇಗೌಡರಿಗೆ ಸಂಕ್ರಾಂತಿ ಶುಭ ಕೋರಲು ಬಂದಿದ್ದೆ. ಜೆಡಿಎಸ್ ಸೇರ್ಪಡೆ ಕುರಿತು ಯಾವುದೇ ಮಾತುಕತೆಯಾಗಿಲ್ಲ ಅಂತ ಸ್ಪಷ್ಟಪಡಿಸಿದ್ರು.
ಸಂಕ್ರಾಂತಿ ಹಬ್ಬದಂದು ಶುಭ ಕೋರಿದ್ದೀನಿ ಅಷ್ಟೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಾರದು. ದೇವೇಗೌಡರ ಅಭಿಪ್ರಾಯವೂ ಇದೇ ಇದೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿಚಾರ ಕಾಂಗ್ರೆಸ್ ಹೈ ಕಮಾಂಡ್ ಗೆ ಬಿಟ್ಟ ವಿಷಯ. ಅದರ ಬಗ್ಗೆ ಮಾತಾಡುವಷ್ಟು ದೊಡ್ಡವರಲ್ಲ. ನಾವು ಕೇವಲ ಸಲಹೆ ಕೊಡುವವರು ಅಂದ್ರು.
ಕರ್ನಾಟಕದಲ್ಲಿ ಕೆಲವರು ಕೆಟ್ಟ ವಾತಾವರಣ ತರಲು ಪ್ರಯತ್ನಿಸುತ್ತಾರೆ. ಇಂದು ಸಂಕ್ರಾಂತಿ ರಾಜ್ಯದ ಜನತೆಗೆ ಒಳ್ಳೆಯದಾಗಲಿ ಅಂತ ಹೇಳೋ ಮೂಲಕ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದ್ರು.